ಬೆಂಗಳೂರು: ‘ನಮ್ಮ ಮೆಟ್ರೊ’ ಜಾಲದ ಉತ್ತರದ ತುತ್ತತುದಿಯ ಮೆಟ್ರೊನಿಲ್ದಾಣವಾದ ನಾಗಸಂದ್ರ ಹಾಗೂ ದಕ್ಷಿಣದ ಕೊನೆಯ ನಿಲ್ದಾಣವಾದ ಯಲಚೇನಹಳ್ಳಿ ನಡುವಿನ 24 ಕಿ.ಮೀ ಉದ್ದದ ಮಾರ್ಗದಲ್ಲಿ ಮಂಗಳವಾರ ಪರೀಕ್ಷಾರ್ಥ ರೈಲು ಸಂಚಾರ ನಡೆಯಿತು.
‘ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದಕ್ಕೆ ಮುನ್ನ ಸಿಬ್ಬಂದಿ ಹಾಗೂ ವ್ಯವಸ್ಥೆಯ ಸನ್ನದ್ಧತೆ ಪರಿಶೀಲಿಸುವ ಸಲುವಾಗಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪರೀಕ್ಷೆ ನಡೆಸಲಾಯಿತು. ಅಣಕು ವೇಳಾಪಟ್ಟಿ ಪ್ರಕಾರ ಪ್ರತಿ 10 ನಿಮಿಷಕ್ಕೊಂದು ರೈಲುಗಳು ಸಂಚಾರ ನಡೆಸಿದವು.
ಒಟ್ಟು 11 ರೈಲುಗಳನ್ನು ಬಳಸಲಾಯಿತು. ಯಲಚೇನಹಳ್ಳಿ– ಸಂಪಿಗೆ ರಸ್ತೆ ನಡುವಿನ ಎಲ್ಲ ನಿಲ್ದಾಣಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಿದರು’ ಎಂದು ಬೆಂಗಳೂರು ಮೆಟ್ರೊ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
‘ಪರೀಕ್ಷಾರ್ಥ ಸಂಚಾರ ಸಾಂಗವಾಗಿ ನಡೆದಿದೆ. ದೋಷಗಳು ಕಂಡುಬಂದಿಲ್ಲ. ಬುಧವಾರವೂ ಈ ಪ್ರಕ್ರಿಯೆ ಮುಂದುವರಿಯಲಿದೆ’ ಎಂದರು.
ಇಂದು ಮುಖ್ಯಮಂತ್ರಿ ಪರಿಶೀಲನೆ: ಮೆಜೆಸ್ಟಿಕ್ನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಬುಧವಾರ ಸಂಜೆ 6 ಗಂಟೆಗೆ ಉತ್ತರ –ದಕ್ಷಿಣ ಕಾರಿಡಾರ್ನ ಮಾರ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ನಡೆಸಲಿದ್ದಾರೆ.
ನಮ್ಮ ಮೆಟ್ರೊ ಮೊದಲ ಹಂತವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜೂನ್ 17ರಂದು ಉದ್ಘಾಟಿಸಲಿದ್ದಾರೆ.