ಬೆಂಗಳೂರು: ಎಸ್ಎಇ ಇಂಡಿಯಾ ಆಯೋಜಿಸುವ ‘ಚಾಲಕ ರಹಿತ ಪುಟ್ಟ ವಿಮಾನ ಸ್ಪರ್ಧೆ’ಯಲ್ಲಿ ನಗರದ ಪಿಇಎಸ್ಐಟಿ ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ಭಾರತ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ್ದಾರೆ.
ಈ ಮೂಲಕ ₹1 ಲಕ್ಷ ಬಹುಮಾನವನ್ನು ತಂಡ ತನ್ನದಾಗಿಸಿಕೊಂಡಿದೆ. ವಿನ್ಯಾಸ ವಿಭಾಗದಲ್ಲಿ ಈ ತಂಡಕ್ಕೆ 2ನೇ ಸ್ಥಾನ ಲಭಿಸಿದೆ. ಜೂನ್ 8ರಿಂದ 10ರವರೆಗೆ ಚೆನ್ನೈನಲ್ಲಿ ಸ್ಪರ್ಧೆ ನಡೆದಿದೆ.
ಶ್ರೇಯಾಂಕ್ ಪಿ. ಜೋಯಿಸ್, ಕೆ. ಭಾಸ್ಕರ್, ಹಿಂಮಾಶು ಜೋಷಿ, ಅಬ್ರಾರ್ ಶೇಕ್, ಅಮನ್ ಕುಮಾರ್ ಮತ್ತು ಯಶ್ ಅವರ ತಂಡದ ನೇತೃತ್ವವನ್ನು ಡಾ. ಎಸ್.ವಿ. ಸತೀಶ್ ಅವರು ವಹಿಸಿದ್ದರು.
ವಿಮಾನ ರಚನೆಯ ವಿನ್ಯಾಸ, ತೂಕವನ್ನು ಹೊತ್ತು ಹಾರುವ ಸಾಮರ್ಥ್ಯ, ವಿಮಾನದ ಬಿಡಿ ಭಾಗ ತೆಗೆದುಕೊಂಡು 3 ನಿಮಿಷದೊಳಗೆ ಜೋಡಿಸಿ ಹಾರಾಟ ನಡೆಸುವುದು ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.
‘ಶತ್ರು ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ, ಪ್ರಕೃತಿ ವಿಕೋಪ ಸ್ಥಳಗಳಲ್ಲಿ ಪರಿಹಾರ ಕಾರ್ಯ ಮೊದಲಾದ ಉದ್ದೇಶಗಳಿಗಾಗಿ ಚಾಲಕ ರಹಿತ ವಿಮಾನಗಳನ್ನು ಬಳಸಲಾಗುತ್ತದೆ. ಕೃಷಿ ಚಟುವಟಿಕೆಗಳು ಹಾಗೂ ಸಂಚಾರ ದಟ್ಟಣೆಯ ಸ್ಥಿತಿಗತಿಯ ಕ್ಷಣ ಕ್ಷಣದ ಮಾಹಿತಿ ನೀಡುವ ಕಾರ್ಯಕ್ಕೂ ಈ ಚಾಲಕ ರಹಿತ ವಿಮಾನಗಳನ್ನು ಬಳಸಿಕೊಳ್ಳಬಹುದಾಗಿದೆ. ಚಾಲಕ ರಹಿತ ಪುಟ್ಟ ವಿಮಾನಗಳ ಸಂಶೋಧನೆಯನ್ನು ಪ್ರೋತ್ಸಾಹಿಸಲು ಸ್ಪರ್ಧೆ ನಡೆಸಲಾಗುತ್ತಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.