ಹುಬ್ಬಳ್ಳಿ: ಶಾಶ್ವತ ನೀರಾವರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಿದ್ದರಿಂದ ಬೆಳಗಾವಿ ವಿಭಾಗ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹ 97 ಲಕ್ಷ ನಷ್ಟವಾಗಿದೆ.
ಮಹಾದಾಯಿ, ಕಳಸಾ–ಬಂಡೂರಿ ನಾಲಾ ಯೋಜನೆ ಜಾರಿ ಬೇಡಿಕೆ ಪ್ರಮುಖವಾಗಿದ್ದರಿಂದ ಧಾರವಾಡ ಜಿಲ್ಲೆಯಲ್ಲಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಅದರಲ್ಲೂ ಹುಬ್ಬಳ್ಳಿ, ನವಲಗುಂದ, ನರಗುಂದದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ನಷ್ಟದ ಪ್ರಮಾಣ ಈ ಭಾಗದಲ್ಲಿ ಹೆಚ್ಚಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ನಿತ್ಯ 2,951 ಮಾರ್ಗಗಳಲ್ಲಿ ಸಂಸ್ಥೆಯ ವಾಹನಗಳು ಸಂಚರಿಸುತ್ತವೆ. ಜೂನ್ 12 ರಂದು ಕರ್ನಾಟಕ ಬಂದ್ ಇದ್ದುದ್ದರಿಂದ ಗಲಭೆ ಆಗಬಹುದು ಎಂದು ಬೆಳಿಗ್ಗೆಯಿಂದಲೇ ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಬಿರುಸಿದ್ದ ಕಡೆಗಳಲ್ಲಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಒಟ್ಟು ಮಾರ್ಗಗಳಲ್ಲಿ 2,449 ಮಾರ್ಗಗಳಲ್ಲಿ ಬಸ್ ಸಂಚರಿಸಿದರೆ, 502 ಮಾರ್ಗಗಳಲ್ಲಿ ಬಸ್ ಮಧ್ಯಾಹ್ನದವರೆಗೂ ಸಂಚರಿಸಲಿಲ್ಲ.
ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯಿಂದ ಬೆಳಿಗ್ಗೆ 8 ಗಂಟೆಯವರೆಗೂ ವಾಹನಗಳು ನಿರಾತಂಕವಾಗಿ ಸಂಚರಿಸಿದವು. ಆ ನಂತರ ಪ್ರತಿಭಟನೆಯ ಕಾವು ಹೆಚ್ಚಾಗಿದ್ದರಿಂದ ಸಂಚಾರ ಸಾಧ್ಯವಾಗಲಿಲ್ಲ. ಹುಬ್ಬಳ್ಳಿವೊಂದರಲ್ಲಿಯೇ 403 ಮಾರ್ಗಗಳಲ್ಲಿ ಬಸ್ ಸಂಚಾರ ರದ್ದಾಗಿದ್ದರಿಂದ ₹ 49 ಲಕ್ಷ ನಷ್ಟವಾಗಿದೆ.
ಗದಗ ಜಿಲ್ಲೆಯಲ್ಲಿಯೂ ಹೋರಾಟದ ಕಾವು ಹೆಚ್ಚಿದ್ದರಿಂದ 25 ಮಾರ್ಗಗಳಲ್ಲಿ ಬಸ್ ಸಂಚರಿಸಲಿಲ್ಲ. ಬೆಳಿಗ್ಗೆ ಸ್ವಲ್ಪ ಹೊತ್ತು ಬಸ್ ಸಂಚರಿಸಿದವು. ಆ ನಂತರ ಸಂಚಾರ ಹಿಂತೆಗೆದುಕೊಳ್ಳಲಾಯಿತು. ಅದರಿಂದ ಒಟ್ಟು ₹ 20 ಲಕ್ಷ ನಷ್ಟವಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಯಾಣಿಕರ ಪರದಾಟ: ಹುಬ್ಬಳ್ಳಿ, ನರಗುಂದ, ನವಲಗುಂದ ಪ್ರದೇಶದಲ್ಲಿ ಬಸ್ಗಳು ಮಧ್ಯಾಹ್ನದವರೆಗೆ ಸಂಚರಿಸದ ಕಾರಣ ಪ್ರಯಾಣಿಕರು ಪರದಾಡ ಬೇಕಾಯಿತು. ಶಾಲಾ–ಕಾಲೇಜುಗಳಿಗೆ, ಕಚೇರಿಗಳಿಗೆ ರಜೆ ಇರಲಿಲ್ಲ. ಶಾಲೆ ಹಾಗೂ ಕಚೇರಿಗಳಿಗೆ ತೆರಳಲು ವಿದ್ಯಾರ್ಥಿಗಳು, ನೌಕರರು ತೀವ್ರ ತೊಂದರೆ ಎದುರಿಸಬೇಕಾಯಿತು.
‘ಪ್ರತಿಭಟನೆ ತೀವ್ರವಾಗಿರುವ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಯಾವುದೇ ಬಸ್ ಹಾನಿಗೀಡಾಗಿಲ್ಲ. ಪ್ರತಿಭಟನೆಯ ಕಾವು ತಣ್ಣಗಾದ ಮೇಲೆ ಮಧ್ಯಾಹ್ನದ ನಂತರ ಸಂಚಾರ ಆರಂಭಿಸಲಾಯಿತು’ ಎಂದು ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ತಿಳಿಸಿದರು.
ಅಂಕಿ– ಅಂಶ
2,951 ಒಟ್ಟು ವಾಹನಗಳ ಮಾರ್ಗ
2,502 ಸಂಚರಿಸಿದ ವಾಹನಗಳ ಮಾರ್ಗ
502 ಸಂಚರಿಸದ ವಾಹನಗಳ ಮಾರ್ಗ
* *
ಬಸ್ಗಳಿಗೆ ಹಾನಿಯಾಗಬಾರದು ಎಂದು ಮಧ್ಯಾಹ್ನದವರೆಗೆ ಕೆಲವು ಕಡೆ ವಾಹನ ಸಂಚಾರ ತಡೆ ಹಿಡಿಯಲಾಗಿತ್ತು. ಮಧ್ಯಾಹ್ನದ ನಂತರ ಎಂದಿನಂತೆ ಸಂಚರಿಸಿವೆ
ಸದಾನಂದ ಡಂಗನವರ
ಅಧ್ಯಕ್ಷ, ವಾಕರಸಾ ಸಂಸ್ಥೆ, ಹುಬ್ಬಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.