ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದಿರಿಸಿದ್ದ ಆಸನದಲ್ಲಿ ಮತ್ತೊಬ್ಬರ ಪ್ರಯಾಣ: ಪ್ರಯಾಣಿಕನಿಗೆ ಸಿಕ್ಕಿತು ₹75,000

Last Updated 14 ಜೂನ್ 2017, 13:08 IST
ಅಕ್ಷರ ಗಾತ್ರ

ನವದೆಹಲಿ: ರೈಲಿನಲ್ಲಿ ತಮಗೆ ನಿಗದಿಯಾಗಿದ್ದ ಆಸನದಲ್ಲಿ ಮತ್ತೊಬ್ಬರು ಕುಳಿತು ಪ್ರಯಾಣಿಸಿದ್ದರಿಂದ ಸೀಟ್‌ ಇಲ್ಲದೆ ಪ್ರಯಾಣಿಸಿದ ವ್ಯಕ್ತಿಗೆ ₹75 ಸಾವಿರ ಪರಿಹಾರ ನೀಡಬೇಕು ಎಂದು ದೆಹಲಿ ರಾಜ್ಯ ಗ್ರಾಹಕ ರಕ್ಷಣಾ ಆಯೋಗದ ನ್ಯಾಯಲಯ, ರೈಲ್ವೆ ಇಲಾಖೆಗೆ ಸೂಚನೆ ನೀಡಿದೆ.

ರೈಲ್ವೆ ಇಲಾಖೆ ರೈಲಿನ ಮೀಸಲು ಬೋಗಿಗಳಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಪ್ರಯಾಣಿಸುವವರನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಹೇಳಿರುವ ನ್ಯಾಯಾಲಯ, ‘ಪ್ರಯಾಣಿಕರಿಗೆ ಉಂಟಾದ ತೊಂದರೆ ಹಾಗೂ ಅನಾನುಕೂಲತೆ’ಗಾಗಿ ಈ ಪರಿಹಾರ ನೀಡಬೇಕೆಂದು ಹೇಳಿದೆ.

2013ರ ಮಾರ್ಚ್‌ 30ರಂದು ದೆಹಲಿಯ ಲೋದಿ ಕಾಲೋನಿ ನಿವಾಸಿಯಾಗಿರುವ ವಿ.ವಿಜಯ್‌ ಕುಮಾರ್‌ ಅವರು ವಿಶಾಖಪಟ್ಟಣಕ್ಕೆ ತೆರಳಲು ದಕ್ಷಿಣ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಲೋವರ್‌ ಬರ್ತ್‌ ಸೀಟ್‌ ಬುಕ್‌ ಮಾಡಿದ್ದರು. ಮಾರ್ಗ ಮಧ್ಯೆ ಮಧ್ಯಪ್ರದೇಶದ ಬೀನಾ ಜಂಕ್ಷನ್‌ ಬಳಿ ರೈಲು ನಿಂತಾಗ ಹಲವು ಪ್ರಯಾಣಿಕರು ಮೀಸಲು ಬೋಗಿಯನ್ನು ಹತ್ತಿದ್ದರು.

ಈ ವೇಳೆ ವಿವೇಕ್‌ ಅವರಿಗೆ ನಿಗದಿಯಾಗಿದ್ದ ಸೀಟ್‌ನಲ್ಲಿ ಬೇರೊಬ್ಬರು ಕುಳಿತು ಪ್ರಯಾಣಿಸಿದ್ದರು. ಮೊದಲೇ ಕೀಲು ನೋವು ಸಮಸ್ಯೆಯಿಂದ ಬಳಲುತ್ತಿದ್ದ ವಿವೇಕ್‌ ಅವರಿಗೆ ಇದರಿಂದಾಗಿ ತೊಂದರೆಯಾಗಿತ್ತು.

ಇದರ ನಡುವೆ ರೈಲು ಟಿಕೆಟ್‌ ಪರೀಕ್ಷಕರು(ಟಿಟಿಇ) ಸಹ ಆಗಮಿಸಿದ್ದರು. ಅವರಿಗೂ ಸಮಸ್ಯೆ ವಿವರಿಸಲಾಗಿತ್ತು. ಆದರೆ ವಿವೇಕ್‌ ಅವರಿಗೆ ನಿಂತುಕೊಂಡೇ ಪ್ರಯಣಿಸುವಂತೆ ಟಿಟಿಇ ಸೂಚಿಸಿದ್ದರು. ಇದರಿಂದ ಬೇಸರಗೊಂಡ ವಿವೇಕ್‌, ತಮಗಾದ ತೊಂದರೆಗೆ ₹20 ಲಕ್ಷ ಪರಿಹಾರ ದೊರಕಿಸಿಕೊಡುವಂತೆ ಗ್ರಾಹಕ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದರು. ನಾಲ್ಕು ವರ್ಷಗಳ ವಿಚಾರಣೆ ಬಳಿಕ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT