ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗವು ವಿಶ್ವ ಪರಿಸರ ದಿನ ಪ್ರಯುಕ್ತ ಜೂನ್ 5 ರಂದು ಬಾಣಸವಾಡಿಯ ಬುಲೆವಾರ್ಡ್ ಉದ್ಯಾನದಲ್ಲಿ ನೆಟ್ಟಿರುವ ಗಿಡಗಳು ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿವೆ.
‘ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಈ ಸಸಿಗಳೆ ಹೇಳುತ್ತಿವೆ. ಸುದ್ದಿ ಮಾಧ್ಯಮಗಳ ಮುಂದೆ ಅವರು ಸಸಿ ನೆಡುವ ನಾಟಕ ಮಾಡಿದ್ದಾರೆ. ಬಳಿಕ, ಪರಿಸರ ದಿನಾಚರಣೆ ಮುಗಿಯಿತೆಂದು ಅವರು ಭಾವಿಸಿದಂತಿದೆ’ ಎಂದು ಸ್ಥಳೀಯ ನಿವಾಸಿ ಆನಂದ್ ಅಸಮಾಧಾನ ವ್ಯಕ್ತಪಡಿಸಿದರು.
‘ಗಿಡಗಳನ್ನು ಇಟ್ಟಿರುವ ಗುಂಡಿಗಳಿಗೆ ಮಣ್ಣು ತುಂಬಬೇಕು ಎಂದು ನನಗೂ ಅನಿಸಿತು. ಉದ್ಯಾನದ ಸುತ್ತಲು ತಂತಿಬೇಲಿ ಹಾಕಿದ್ದಾರೆ. ಹಾಗಾಗಿ ಒಳಗೆ ಹೋಗಲಾಗಲಿಲ್ಲ. ಈಗ ಆ ಗಿಡಗಳು ಒಣಗುತ್ತಿದೆ’ ಎಂದು ಸ್ಥಳೀಯ ಆಟೊ ಚಾಲಕ ಮುಸ್ತಫಾ ಅಸಹಾಯಕತೆ ವ್ಯಕ್ತಪಡಿಸಿದರು.
ಹೊಸ ಸಸಿ ನೆಡುತ್ತೇವೆ: ‘ಬುಲೆವಾರ್ಡ್ ಉದ್ಯಾನದ ಅಭಿವೃದ್ಧಿಗೆ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿರಲಿಲ್ಲ. ಹಾಗಾಗಿ ಅವರು ನೆಟ್ಟಿರುವ ಸಸಿಗಳ ಕುರಿತು ಹೆಚ್ಚು ಗಮನ ಹರಿಸಿಲ್ಲ.
ಕೆಲಸ ಆರಂಭಿಸಲು ಆದೇಶ ನೀಡಿದ್ದೇನೆ. ಈಗ ಒಣಗಿರುವ ಸಸಿಗಳ ಸ್ಥಳದಲ್ಲಿಯೇ ಹೊಸ ಸಸಿಗಳನ್ನು ಬೆಳೆಸುವಂತೆ ಉದ್ಯಾನ ಅಭಿವೃದ್ಧಿ ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ಪೂರ್ವ ವಲಯದ ಸಹಾಯಕ ಅರಣ್ಯಾಧಿಕಾರಿ ಜಯರಾಮ್ ರೆಡ್ಡಿ ಪ್ರತಿಕ್ರಿಯಿಸಿದರು.
ಗುಂಡಿಯಲ್ಲಿ ಇಟ್ಟ ಗಿಡದ ಸುತ್ತ ಮಣ್ಣು ಮುಚ್ಚದ ಕಾರಣ ಒಣಗಿದೆ