ಬೆಂಗಳೂರು: ‘ವೀರಶೈವ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
‘ವೀರಶೈವ ಧರ್ಮ, ಲಿಂಗಾಯತ ಧರ್ಮ ಎಂಬ ಜಿಜ್ಞಾಸೆ ಇದೆ. ಸರಿಯಾದ ಹೆಸರು ಯಾವುದು’ ಎಂದು ವೇದಿಕೆ ಮೇಲಿದ್ದವರನ್ನು ಪ್ರಶ್ನಿಸಿದರು.
ಆಗ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು, ‘ವೀರಶೈವ ಲಿಂಗಾಯತ ಧರ್ಮ’ ಎಂದು ಉತ್ತರಿಸಿದರು.
‘ಸರಿ, ಕೇಂದ್ರಕ್ಕೆ ಶಿಫಾರಸು ಮಾಡುವ ಸಂದರ್ಭದಲ್ಲಿ ಸಮುದಾಯದ ಮುಖಂಡರ ಜತೆ ಚರ್ಚಿಸಿ ಒಮ್ಮತದ ಹೆಸರನ್ನು ಉಲ್ಲೇಖಿಸುತ್ತೇನೆ’ ಎಂದು ತಿಳಿಸಿದರು.
ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಕೂಡಲ ಸಂಗಮದಲ್ಲಿ ವಚನ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿಸಬೇಕು. ಸಮುದಾಯದಲ್ಲಿ 60 ಉಪ ಜಾತಿಗಳಿದ್ದು, ಅವುಗಳನ್ನು ವೀರಶೈವ ಧರ್ಮಕ್ಕೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಶರಣ ಅರಳಯ್ಯ ಅವರ ಸ್ಮಾರಕ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.