ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತಾ ಕ್ರಮ ಕೈಗೊಳ್ಳಲು ಡಿ.ಸಿ ತಾಕೀತು

ತಂಡ್ರಕುಳಿ ದುರ್ಘಟನೆ: ಎನ್‌ಎಚ್‌ಎಐ, ಐಆರ್‌ಬಿ ಕಂಪೆನಿ ಅಧಿಕಾರಿಗಳ ಜತೆ ಸಭೆ
Last Updated 15 ಜೂನ್ 2017, 8:51 IST
ಅಕ್ಷರ ಗಾತ್ರ

ಕಾರವಾರ: ‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಉಂಟಾಗುತ್ತಿರುವ ಭೂಕುಸಿತ ಹಾಗೂ ಅನಾಹುತಗಳನ್ನು ತಪ್ಪಿಸಲು ವೈಜ್ಞಾನಿಕವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಐಆರ್‌ಬಿ ಕಂಪೆನಿಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕುಮಟಾ ತಾಲ್ಲೂಕಿನ ತಂಡ್ರಕುಳಿ ಯಲ್ಲಿ ಇತ್ತೀಚೆಗೆ ಸಂಭವಿಸಿದ ಅನಾಹುತ ನಿಮಿತ್ತ ಬುಧವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕರೆಯಲಾಗಿದ್ದ ಎನ್‍ಎಚ್‍ಎಐ ಹಾಗೂ ಐಆರ್‌ಬಿ ಕಂಪೆನಿಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿದರು.

‘ತಂಡ್ರಕುಳಿಯಲ್ಲಿ ಕಳೆದ ಭಾನು ವಾರ ದುರ್ಘಟನೆ ಸಂಭವಿಸಿದ ವೇಳೆ ರಕ್ಷಣಾ ಚಟುವಟಿಕೆಯಲ್ಲಿ ಅಗತ್ಯ ಮಾರ್ಗ ದರ್ಶನ ನೀಡಲು ಐಅರ್‌ಬಿಯ ತಂತ್ರ ಜ್ಞರು ಲಭ್ಯವಿರಲಿಲ್ಲ. ಇದೇ ರೀತಿ ಯಂತ್ರೋಪಕರಣಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು.

ವರದಿ ಕೊಡಿ: ‘ಹೆದ್ದಾರಿಯುದ್ದಕ್ಕೂ ಗುಡ್ಡ ಕುಸಿತ ಸಾಧ್ಯತೆ ಸ್ಥಳಗಳನ್ನು ಕಂದಾಯ ಇಲಾಖೆ ವತಿಯಿಂದ ಈಗಾಗಲೇ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪೆನಿ ಪ್ರತ್ಯೇಕ ಪರಿಶೀಲನೆ ನಡೆಸಿ ಅಂತಹ ಸ್ಥಳಗಳನ್ನು ಗುರುತಿಸಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಶುಕ್ರವಾರದ ಒಳಗಾಗಿ ವರದಿಯನ್ನು ಸಲ್ಲಿಸಬೇಕು. ಐಆರ್‌ಬಿಯ ಹಿರಿಯ ತಾಂತ್ರಿಕ ಅಧಿಕಾರಿಯನ್ನು ಮಳೆಗಾಲ ಅವಧಿ ಮುಗಿಯುವವರೆಗೆ ಕಾರವಾರದಲ್ಲಿ ಕಡ್ಡಾಯವಾಗಿ ನಿಯೋಜಿಸಬೇಕು’ ಎಂದು ಅವರು ಸೂಚಿಸಿದರು.

‘ಹೆದ್ದಾರಿಯಲ್ಲಿ ಸಂಭವಿಸುವ ಹಲವು ಅಪಘಾತಗಳಿಗೆ ಐಆರ್‌ಬಿ ಕಂಪೆನಿಯೇ ನೇರ ಹೊಣೆಯಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ನಾಮಕಾವಸ್ತೆ ಬೋರ್ಡ್‌ಗಳನ್ನು ಹಾಗೂ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಅಪಾಯಕಾರಿ ತಿರುವುಗಳಲ್ಲಿ ಸಹ ರಸ್ತೆ ಬದಿಯಲ್ಲಿ ಗುಂಡಿ ತೋಡಲಾಗಿದ್ದು, ಭದ್ರ ಬ್ಯಾರಿಕೇಡಿಂಗ್‌ ಮಾಡಿರುವುದಿಲ್ಲ.

ಸಮರ್ಪಕವಾದ ಸೂಚನಾ ಫಲಕಗಳು, ಭದ್ರ ಬ್ಯಾರಿಕೇಡ್‌ಗಳು, ಎಚ್ಚರಿಕೆ ದೀಪಗಳನ್ನು ಅಳವಡಿಸಬೇಕು. ಐಆರ್‌ಬಿ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸಿರುವುದು ಕಂಡು ಬಂದರೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಪ್ರಸಾದ್ ಹಾಗೂ ಐಆರ್‌ಬಿ ಪ್ರಧಾನ ವ್ಯವಸ್ಥಾಪಕ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉಪವಿಭಾಗಾಧಿಕಾರಿಗಳಾದ ರಮೇಶ ಕಳಸದ, ಶಿವಾನಂದ ಕರಾಳೆ ಉಪಸ್ಥಿತರಿದ್ದರು.

ಜನರ ಜೀವಕ್ಕಿಂತ ಯೋಜನೆ ದೊಡ್ಡದಲ್ಲ..
‘ಮಳೆಗಾಲದಲ್ಲಿ ಅನಾಹುತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಐಆರ್‌ಬಿ ಕಂಪೆನಿಗೆ ಮೊದಲೇ ಸೂಚನೆ ನೀಡಲಾಗಿತ್ತು.

ಮುಂಜಾಗ್ರತೆ ಕೈಗೊಳ್ಳದಿರುವುದು ಹಾಗೂ ಅನಾಹುತ ಸಂಭವಿಸಿದಾಗ ತುರ್ತು ಸ್ಪಂದನೆ ಮಾಡದಿರುವುದು ಸ್ಪಷ್ಟವಾಗಿದೆ. ಜನರ ಜೀವಕ್ಕಿಂತ ಯಾವುದೇ ಯೋಜನೆಗಳು ದೊಡ್ಡದಲ್ಲ. ರಸ್ತೆ ಸುರಕ್ಷತಾ ಕ್ರಮಗಳನ್ನು ನೋಡಿಕೊಳ್ಳಬೇಕಾದುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲಸವಾಗಿದ್ದು, ಪ್ರಾಧಿಕಾರ ಸರಿಯಾಗಿ ನಿಗಾ ವಹಿಸುತ್ತಿಲ್ಲ’ ಎಂದು ನಕುಲ್‌ ತೀವ್ರ ತರಾಟೆಗೆ ತೆಗೆದುಕೊಂಡರು.

*
ಮುಂದೆ ಈ ರೀತಿ ದುರ್ಘಟನೆ ಸಂಭವಿಸಿದರೆ ಐಆರ್‌ಬಿ, ಎನ್‍ಎಚ್‍ಎಐ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸು ವುದು ಅನಿವಾರ್ಯವಾಗಲಿದೆ.
-ಎಸ್‌.ಎಸ್‌.ನಕುಲ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT