ತಿರುವನಂತಪುರ: ಕೊಚ್ಚಿ ಮೆಟ್ರೊ ರೈಲು ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ವೇದಿಕೆ ಹಚಿಕೊಳ್ಳಲು ‘ಮೆಟ್ರೊ ಮ್ಯಾನ್’ ಖ್ಯಾತಿ’ಯ ಇ. ಶ್ರೀಧರನ್ ಅವರಿಗೆ ಆಹ್ವಾನ ನೀಡುವುದಾಗಿ ಪ್ರಧಾನಿ ಕಾರ್ಯಾಲಯ (ಪಿಎಂಒ) ತಿಳಿಸಿದೆ. ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳುವ ಗಣ್ಯರ ಪಟ್ಟಿಯಿಂದ ಶ್ರೀಧರನ್ ಅವರನ್ನು ಕೈಬಿಟ್ಟಿರುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.
ದೆಹಲಿ ಮೆಟ್ರೊ ರೈಲು ನಿಗಮದ ಹಿರಿಯ ಸಲಹೆಗಾರರಾಗಿರುವ ಇ. ಶ್ರೀಧರನ್, ಕೊಚ್ಚಿ ಮೆಟ್ರೊದ ರೂವಾರಿಯೂ ಆಗಿದ್ದಾರೆ.
ಶ್ರೀಧರನ್, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ, ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನೆಮ್ ರಾಜಶೇಖರನ್ ಅವರಿಗೆ ಪ್ರಧಾನಿ ಜತೆ ವೇದಿಕೆ ಹಂಚಿಕೊಳ್ಳಲು ಆಹ್ವಾನ ನೀಡಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಕೊಚ್ಚಿ ಮೆಟ್ರೊ ರೈಲು ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಜೂನ್ 17) ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಜತೆ ವೇದಿಕೆ ಹಂಚಿಕೊಳ್ಳಲಿರುವ ಮತ್ತು ಪ್ರಯಾಣಿಸಲಿರುವ ಗಣ್ಯರ ಪಟ್ಟಿಯಲ್ಲಿ ಶ್ರೀಧರನ್ ಅವರ ಹೆಸರಿಲ್ಲದಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡಿದ್ದ ಕೇರಳ ಸರ್ಕಾರ, ಪ್ರಧಾನಿ ಜತೆ ಪ್ರಯಾಣಿಸಲಿರುವವರ ಪಟ್ಟಿಯನ್ನು ಪರಿಷ್ಕರಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿತ್ತು.