ಚಂಡೀಗಡ: ಮನೆಯ ಮಾಜಿ ಬಾಣಸಿಗ ಮತ್ತು ಇತರ ನೌಕರರಿಗೆ ಕೋಟ್ಯಂತರ ರೂಪಾಯಿಗಳ ಮರಳು ಗಣಿಗಾರಿಕೆ ಮಂಜೂರು ಮಾಡಿಸಿ ವಿವಾದಕ್ಕೆ ಒಳಗಾಗಿರುವ ಪಂಜಾಬ್ನ ಅತೀ ಶ್ರೀಮಂತ ಸಚಿವ ಈಗ ಮತ್ತೊಂದು ವಿವಾದಕ್ಕೆ ಗುರಿ ಆಗಿದ್ದಾರೆ.
ಸಚಿವ ರಾಣಾ ಗುರುಜಿತ್ ಸಿಂಗ್ ಅವರು ತಮ್ಮ ಮಾಜಿ ಅಡುಗೆಯವನಿಂದ ಮತ್ತು ಇತರ ನೌಕರರಿಂದ ಕೋಟ್ಯಂತರ ರೂಪಾಯಿಗಳ ಸಾಲ ಪಡೆದಿದ್ದಾರೆ ಎಂದರೆ ನಂಬುತ್ತೀರಾ?.
ಈ ಕುರಿತು ವಿಚಾರಣೆ ಎದುರಿಸುತ್ತಿರುವ ಸಚಿವರು, ತಮ್ಮ ಮಾಜಿ ನೌಕರರ ಜತೆ ಯಾವುದೇ ರೀತಿಯ ವ್ಯವಹಾರ ನಡೆಸುತ್ತಿಲ್ಲ ಎಂದಿದ್ದಾರೆ. ಅವರ ಮಾಜಿ ಬಾಣಸಿಗ ಅಮಿತ್ ಬಹಾದ್ದೂರ್ಗೆ 26 ಕೋಟಿ ರೂಪಾಯಿಗಳ ಮರಳು ಗಣಿಗಾರಿಕೆ ಗುತ್ತಿಗೆ ದೊರೆತಿದೆ.
ಇದಲ್ಲದೆ ಬಾಣಸಿಗ ಬಹಾದ್ದೂರ್ ಮತ್ತು ಇನ್ನೊಬ್ಬ ನೌಕರ ಬಾಲರಾಜ್ ಸಿಂಗ್ ನಿರ್ದೇಶಕರಾಗಿರುವ ಕಂಪೆ ನಿಯಿಂದ ಸಚಿವರು ಮತ್ತು ಅವರ ಕುಟುಂಬದ ಸದಸ್ಯರು 25 ಕೋಟಿ ರೂಪಾಯಿಗಳ ಸಾಲ ಪಡೆದಿದ್ದಾರೆ.
ಮನೆಯ ನೌಕರರು ಏಪ್ರಿಲ್ನಲ್ಲಿ ನೌಕರಿ ಬಿಟ್ಟ ನಂತರ ಕೋಟ್ಯಂತರ ರೂಪಾಯಿಗಳ ಮರಳು ಗಣಿಗಾರಿಕೆಗೆ ಗುತ್ತಿಗೆ ದೊರೆತಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತಮ್ಮ ಸಚಿವ ಸಹೋದ್ಯೋಗಿಯನ್ನು ರಕ್ಷಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆಪಾದನೆ ಮಾಡಿವೆ.