ನವದೆಹಲಿ: ಸಿದ್ಧ ಉಡುಪುಗಳಿಂದ ಹಿಡಿದು ಕಾರ್ವರೆಗೆ ಸರಕುಗಳ ತಯಾರಕರು ಜಿಎಸ್ಟಿ ಜಾರಿಗೆ ಮೊದಲು ಮಾರಾಟ ಹೆಚ್ಚಿಸಲು ಬೆಲೆಗಳಲ್ಲಿ ಭಾರಿ ರಿಯಾಯ್ತಿ ಪ್ರಕಟಿಸಿದ್ದಾರೆ.
ಗ್ರಾಹಕರನ್ನು ಸೆಳೆಯಲು ಹಲವಾರು ಆಮಿಷಗಳನ್ನೂ ಒಡ್ಡಲಾಗುತ್ತಿದೆ. ಬೆಲೆ ಕಡಿತದ ಕೊಡುಗೆ ಮೂಲಕ ಸಿದ್ಧ ಉಡುಪು ತಯಾರಕರು ತಮ್ಮ ಹಳೆಯ ಸಂಗ್ರಹ ಕರಗಿಸಲು ಮುಂದಾಗಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆಯಡಿ ಲಾಭದ ಪ್ರಮಾಣ ವ್ಯತ್ಯಾಸವಾಗಲಿದೆ. ಹೀಗಾಗಿ ಅದಕ್ಕೂ ಮೊದಲೇ ಸಂಗ್ರಹದಲ್ಲಿನ ಸರಕನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಲು ತಯಾರಕರು ಉದ್ದೇಶಿಸಿದ್ದಾರೆ.
‘ರಂಜಾನ್ ಖರೀದಿ ಗಮನದಲ್ಲಿಟ್ಟುಕೊಂಡು ಕೂಡ ರಿಯಾಯ್ತಿ ಘೋಷಿಸಲಾಗಿದೆ’ ಎಂದು ಫ್ಯೂಚರ್ ಗ್ರೂಪ್ನ ರಿಟೇಲ್ ಸರ್ವ ಸರಕು ಮಳಿಗೆ ಸೆಂಟ್ರಲ್ನ ಮಾರುಕಟ್ಟೆ ಮುಖ್ಯಸ್ಥ ಜಿತೇಂದ್ರನಾಥ ಪತ್ರಿ ಹೇಳಿದ್ದಾರೆ.