ಬೆಳಗಾವಿ: ‘ರಕ್ಷಾಬಂಧನ ದಿನದಂದು ಸಹೋದರಿಯರಿಗೆ ತಲ್ವಾರ್ ಉಡುಗೊರೆ ಕೊಡಿ’ ಎಂದು ಮಧ್ಯಪ್ರದೇಶದ ಛಿಂದವಾಡದ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷೆ ಸಾಧ್ವಿ ಸರಸ್ವತಿ ಇಲ್ಲಿ ಕರೆ ನೀಡಿದರು.
ಇಲ್ಲಿನ ಶಾಸ್ತ್ರಿ ನಗರದ ಗುಜರಾತ್ ಭವನದಲ್ಲಿ ಗುರುವಾರ ನಡೆದ ಬಜರಂಗ ದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಯುವತಿಯರ ಮೇಲೆ ಕಣ್ಣು ಹಾಕುವ ಅನ್ಯಧರ್ಮದವರಿಗೆ ಬುದ್ಧಿ ಕಲಿಸಬೇಕು’ ಎಂದು ಹೇಳಿದರು.
‘ದೇಶದಲ್ಲಿ ಬಾಂಗ್ಲಾ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಅಲ್ಲದೇ, ಲವ್ ಜಿಹಾದ್ ಹೆಚ್ಚಾಗುತ್ತಿದೆ. ಹಿಂದೂ ಜನಸಂಖ್ಯೆ ಕಡಿಮೆ ಮಾಡಿ, ಮುಸ್ಲಿಂ ಜನಸಂಖ್ಯೆ ಹೆಚ್ಚಿಸುವುದು ಲವ್ಜಿಹಾದ್ನ ಪ್ರಮುಖ ಉದ್ದೇಶ’ ಎಂದು ಅವರು ಆರೋಪಿಸಿದರು.
‘ನಮ್ಮ ಯುವತಿಯರು ರಾಣಿ ಲಕ್ಷ್ಮೀಬಾಯಿ ಅವರಂಥ ಧೀರೆಯರ ಇತಿಹಾಸ ಓದುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದರು.
‘ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ನೇಣಿಗೆ ಹಾಕಿ’
ಪಣಜಿ (ಪಿಟಿಐ): ‘ಪ್ರತಿಷ್ಠೆಗಾಗಿ ಗೋಮಾಂಸ ತಿನ್ನುವವರನ್ನು ನೇಣಿಗೆ ಹಾಕಬೇಕು’ ಎಂದು ಮಧ್ಯಪ್ರದೇಶದ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷೆ ಸಾಧ್ವಿ ಸರಸ್ವತಿ ಗುರುವಾರ ಹೇಳಿದ್ದಾರೆ.