ಬೆಂಗಳೂರು: ‘ಹಳ್ಳಿಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು- ಚೇಳುಗಳಿರುತ್ತವೆ. ಅವು ನಮ್ಮನ್ನು ಕಚ್ಚಿಬಿಡ್ತವೆ ಎಂಬ ಭಯದಿಂದ ತಜ್ಞ ವೈದ್ಯರು ಅತ್ತ ಮುಖ ಮಾಡಲು ಆಸಕ್ತಿ ತೋರಿಸುತ್ತಿಲ್ಲ...’
ಗ್ರಾಮೀಣ ಸೇವೆಗೆ ಮುಂದಾಗದ ತಜ್ಞ ವೈದ್ಯರ ಧೋರಣೆಯನ್ನು ವಿಧಾನಸಭೆಯಲ್ಲಿ ಗುರುವಾರ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಕುಟುಕಿದ್ದು ಹೀಗೆ.
ಕಾಂಗ್ರೆಸ್ನ ಶಿವಾನಂದ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ವೇತನ ಸಾಲದು ಎಂಬ ಒಂದೇ ಕಾರಣವಾದರೆ ಅದನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಬಹುದು. ಆದರೆ, ಇತರ ಕಾರಣಗಳಿಗಾಗಿ ತಜ್ಞ ವೈದ್ಯರು ಹಳ್ಳಿಗಳ ಕಡೆಗೆ ಹೋಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಡರೋಗಿಗಳು ಹಾವು ಚೇಳುಗಳಿಂದ ಕಚ್ಚಿಸಿಕೊಂಡರೂ ಪರವಾಗಿಲ್ಲ. ಇವರು ಮಾತ್ರ ಗ್ರಾಮೀಣ ಆಸ್ಪತ್ರೆಗಳಲ್ಲಿ ಕೆಲವ ಮಾಡುವ ಮಾನವೀಯತೆ ತೋರಿಸುತ್ತಿಲ್ಲ. ತಜ್ಞ ವೈದ್ಯರಿಗೆ ತಿಂಗಳಿಗೆ ₹ 1.25 ಲಕ್ಷ ವೇತನ ನೀಡಲು ಸರ್ಕಾರ ಸಿದ್ಧವಿದ್ದರೂ ಯಾರೊಬ್ಬರೂ ಮುಂದೆ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.