ಉಡುಪಿ: ಸರ್ಕಾರ ಅಥವಾ ಬೇರೆ ಯಾರ ಸಹಾಯ ಇಲ್ಲದೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸ್ವಂತ ಕಟ್ಟಡ ನಿರ್ಮಾಣ ಮಾಡಿರುವುದು ಶ್ಲಾಘ ನೀಯ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕೊಡಲು ಅವಕಾಶ ಇದ್ದರೆ ₹5 ಲಕ್ಷ ನೀಡಲಾಗುವುದು ಎಂದು ಮೀನುಗಾರಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಸಂಘವು ಇಂದ್ರಾಳಿಯಲ್ಲಿ ನಿರ್ಮಾಣ ಮಾಡಿರುವ ‘ಚೇಂಬರ್ ಟವರ್’ ನೂತನ ಕಟ್ಟಡವನ್ನು ಗುರುವಾರ ಉದ್ಘಾ ಟಿಸಿ ಮಾತನಾಡಿದರು. ಯಾವುದಾದದರೂ ಕೆಲಸ ಮಾಡಬೇಕು ಅಂದು ಕೊಂಡರೆ ಅದನ್ನು ಸಾಧಿಸಿ ತೋರಿಸುವುದು ಉಡುಪಿ ಜಿಲ್ಲೆಯ ಜಾಯಮಾನ. ಮೊದಲಿಂದಲೂ ಈ ಸ್ಫೂರ್ತಿಯನ್ನು ಜಿಲ್ಲೆ ಉಳಿಸಿಕೊಂಡು ಬಂದಿದೆ. ಅದು ಹಾಗೆಯೇ ಮುಂದುವರೆಯಲಿ ಎಂದು ಹೇಳಿದರು.
ಉಡುಪಿ ಜನರು ಎಷ್ಟು ಬುದ್ಧಿ ವಂತರು ಹಾಗೂ ಮುಂದಾಲೋಚನೆ ಇರುವವರು ಎಂಬುದಕ್ಕೆ ಹಲವು ಉದಾಹರಣೆ ಸಿಗುತ್ತವೆ. ಇಂದಿರಾ ಗಾಂಧಿ ಅವರು ದೇಶದ 14 ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದರು. ಅವುಗಳಲ್ಲಿ ನಾಲ್ಕು ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವು. ಆಗ ದೇಶದಲ್ಲಿ 300 ಜಿಲ್ಲೆಗಳಿದ್ದವು, ಒಂದೇ ಜಿಲ್ಲೆ ನಾಲ್ಕು ಬ್ಯಾಂಕ್ಗಳನ್ನು ನೀಡಿದರೆ, ಉಳಿದ 299 ಜಿಲ್ಲೆಗಳು 10 ಬ್ಯಾಂಕ್ ನೀಡಿದವು ಎಂದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿದ ಅವರು, ‘ಉದ್ಯಮಿಗಳಿಗೆ ಏಕೆ ಸಹಾಯ ಮಾಡಲಾಗುತ್ತದೆ ಎಂದು ಹಲವರು ಪ್ರಶ್ನಿಸುತ್ತಾರೆ. ಒಬ್ಬ ಉದ್ಯಮಿಗೆ ಸಹಾಯ ಮಾಡಿದರೆ ಅದರಿಂದ ನೂರು ಕುಟುಂಬಗಳಿಗೆ ಕೆಲಸ ಸಿಗುತ್ತದೆ. ಆದ್ದರಿಂದ ಯಾವುದೇ ನಗರ ಬೆಳವಣಿಗೆ ಆಗಬೇಕು ಎಂದರೆ ಉದ್ಯಮಿಗಳ ಕೊಡುಗೆ ಬೇಕಾಗುತ್ತದೆ.
ಕಟ್ಟಡದ ಸಮೀಪವೇ ರೈಲ್ವೆ ಇಲಾಖೆಯ ರಾಮಕೃಷ್ಣ ಹೆಗಡೆ ಕೌಶಲ ಅಭಿವೃದ್ಧಿ ಕೇಂದ್ರ ನಿರ್ಮಾಣ ಆಗುವುದರಿಂದ, ಇಲ್ಲಿಯೂ ಜನದಟ್ಟಣೆ ಹೆಚ್ಚಾಗಲಿದೆ’ ಎಂದರು.
ಸಂಘದ ಅಧ್ಯಕ್ಷ ಕೃಷ್ಣರಾವ್ ಕೊಂಡಚ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸದಸ್ಯ ವಿಜಯ್ ಮಂಚಿ, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ದೇವಾನಂದ್, ಅದಾನಿ ಗ್ರೂಪ್ನ ಉಡುಪಿ ಪವರ್ ಕಾರ್ಪೋರೇಷನ್ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಇದ್ದರು. ಸಂಘದ ಜಂಟಿ ಕಾರ್ಯದರ್ಶಿ ಡಾ. ವಿಜಯೇಂದ್ರ ಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
* *
ಉದ್ಯಮಗಳು ಹೆಚ್ಚಾದರೆ ನೂರಾರು ಜನರಿಗೆ ಉದ್ಯೋಗ ಸಿಗುತ್ತದೆ, ನಗರವೊಂದರ ಬೆಳವಣಿಗೆಗೆ ಅದು ಕಾರಣವಾಗುತ್ತದೆ.
ಕೆ. ರಘುಪತಿ ಭಟ್
ಮಾಜಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.