ವಿಜಯಪುರ: ಬಹೂಪಯೋಗಿ ‘ವಾಟರ್ ಬೈಸಿಕಲ್’ನ್ನು ನಗರದ ಬಿಎಲ್ ಡಿಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾ ನಿಕ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.
ಪ್ರಾಧ್ಯಾಪಕರಾದ ಪ್ರಶಾಂತ ಕಡಿ, ಮುಖ್ಯಸ್ಥರಾದ ಡಾ.ಶೋಭಾ ಸವಣೂರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಂಜನಾ ಕೋಳೂರ, ಶಿವಯೋಗಿ ಕೋಟಿ, ಜೆ.ಚನ್ನಪ್ಪ, ಅನಿಲಕುಮಾರ ನಿಂಬಾಳ ಒಂದು ತಿಂಗಳ ಅವಧಿಯಲ್ಲಿ ₹ 7000 ವೆಚ್ಚದಲ್ಲಿ, ಆರ್ಕಿಮಿಡಿಸ್ ತತ್ವದ ಆಧಾರದಲ್ಲಿ ಈ ಬೈಸಿಕಲ್ ಸಂಶೋಧಿಸಿದ್ದಾರೆ.
25 ಕೆ.ಜಿ. ತೂಕದ ಇದನ್ನು ಅನ್ವೇಷಕರು ‘ಸೌರಶಕ್ತಿ ಚಾಲಿತ ನೀರಿನಲ್ಲಿ ತೇಲುವ ಸೈಕಲ್’ ಎಂದು ಹೆಸರಿಸಿದ್ದು, ಈ ವಾಟರ್ ಬೈಸಿಕಲ್ನ್ನು ಪೆಡಲ್ ಸಹ ಮಾಡಬಹುದು. ಇದರ ಜತೆಗೆ ಬ್ಯಾಟರಿ, ಸೋಲಾರ್ ಬಳಸಿಯೂ ಓಡಿಸಬ ಹುದಾದ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಬಹೂಪಯೋಗಿ: ಈ ಬೈಸಿಕಲ್ ನೀರಿನಲ್ಲಿ ಸರಾಗವಾಗಿ ಸಾಗುತ್ತದೆ. ಬಹುಪಯೋಗಿಯಾಗಿ ಬಳಕೆಗೆ ಬರುತ್ತದೆ ಎನ್ನುತ್ತಾರೆ ಅನ್ವೇಷಣೆಯ ಮಾರ್ಗ ದರ್ಶಕರಾದ ಪ್ರಾಧ್ಯಾಪಕ ಪ್ರಶಾಂತ ಕಡಿ. ‘ಮೈದುಂಬಿ ಹರಿಯುವ ನದಿ, ಹಳ್ಳಗಳನ್ನು ದಾಟಲು ಇದು ಬಲು ಉಪಯೋಗಿ. ಏಕ ಕಾಲದಲ್ಲಿ ಇಬ್ಬರೂ ನದಿ ದಾಟಬಹುದು.
ಇನ್ನೂ ಪ್ರವಾಹ ಪೀಡಿತ ಪ್ರದೇಶ ಗಳಲ್ಲಿ, ನೆರೆ ಹಾವಳಿ ಹೆಚ್ಚಾದ ಸಂದರ್ಭದಲ್ಲಿ, ಜನರು ನಡುಗಡ್ಡೆಯಲ್ಲಿ ಸಿಲುಕಿದಾಗ, ಗ್ರಾಮಗಳು ಜಲಾವೃತ ವಾಗಿ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಇದನ್ನು ತಾತ್ಕಾಲಿಕವಾಗಿ ಬಳಸಬಹುದು.
ತೆಪ್ಪಗಳಲ್ಲಿ ಮೀನುಗಾರಿಕೆ ನಡೆಸುವವರು ಇದನ್ನು ಬಳಸಿ ಮೀನು ಶಿಕಾರಿ ಮಾಡಬಹುದು. ಇದೆಲ್ಲದಕ್ಕಿಂತ ಹೆಚ್ಚಾಗಿ ಜಲಮೂಲದ ಸ್ವಚ್ಛತೆಗೆ ಈ ವಾಟರ್ ಬೈಸಿಕಲ್ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿದೆ’ ಎಂದು ಅವರು ಹೇಳಿದರು.
ತಯಾರಿಕೆಗೆ ಬಳಸಿರುವ ವಸ್ತುಗಳು: ‘ಹಳೆಯ ಸೈಕಲ್, ಏಳು ಅಡಿ ಉದ್ದದ ಎರಡು ಪಿವಿಸಿ ಪೈಪ್ಗಳು, ಸೋಲಾರ್ ಪ್ಯಾನಲ್, ಕಂಟ್ರೋಲರ್, ಸಣ್ಣದಾದ ಮೋಟಾರ್, ಎರಡು ಡಿಎಸಿ ಬ್ಯಾಟರಿ ಸೇರಿದಂತೆ ಸ್ವಲ್ಪ ಕಬ್ಬಿಣದ ಪಟ್ಟಿ, ಸಲಾಕೆ ಬಳಸಿ ಈ ವಾಟರ್ ಬೈಸಿಕಲ್ ತಯಾರಿಸಲಾಗಿದೆ.
ಈ ವಾಟರ್ ಬೈಸಿಕಲ್ನ್ನು ಮೂರು ವಿಧದಲ್ಲಿ ಬಳಸಬಹುದು. ಮೊದಲನೇ ಯದಾಗಿ ಬೈಸಿಕಲ್ ಮೇಲೆ ಕುಳಿತಿರುವ ವ್ಯಕ್ತಿ ಸೈಕಲ್ ಪೆಡಲ್ಗಳನ್ನು ತುಳಿದಂತೆ ಇದರ ಪೆಡಲ್ಗಳನ್ನು ತುಳಿಯುವ ಮೂಲಕ ನದಿಯಲ್ಲಿ ಚಲಿಸಬಹುದು.
ಎರಡನೇಯದಾಗಿ ಇದಕ್ಕೆ ಸೋಲಾರ್ ಬ್ಯಾಟರಿ ಅಳವಡಿಸ ಲಾಗಿದ್ದು, ಸೂರ್ಯನ ಕಿರಣಗಳು ಬಿದ್ದ ತಕ್ಷಣ ತಾನಾಗೆ ಬ್ಯಾಟರಿಗಳು ಚಾರ್ಜ್ ಆಗುವುದರಿಂದ ಪೆಡಲ್ ಹೊಡೆಯದೆ ಸಾಗಬಹುದು.
ಇನ್ನೂ ಮೂರನೇಯದಾಗಿ ಇದಕ್ಕೆ ಅಳವಡಿಸಲಾಗಿರುವ ಬ್ಯಾಟರಿಗಳನ್ನು ಮೊದಲೇ ಚಾರ್ಜ್ ಮಾಡಿಕೊಂಡು ತೆರಳಬಹುದು. ಹೀಗೆ ಸೋಲಾರ್ ಅಥವಾ ಚಾರ್ಜ್ ಮಾಡಿದ ಬ್ಯಾಟರಿಗಳು ಸತತವಾಗಿ ನಾಲ್ಕರಿಂದ ಆರು ಗಂಟೆ ಗಳವರೆಗೆ ಬಳಸಿ ಬೈಸಿಕಲ್ಅನ್ನು ನಿರಂತರ ವಾಗಿ ಚಾಲನೆ ಮಾಡಬಹುದು’ ಎಂದು ಸಂಶೋಧಕ ರಲ್ಲೊಬ್ಬರಾದ ಅನಿಲಕುಮಾರ ನಿಂಬಾಳ ತಿಳಿಸಿದರು.
* *
ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಆವಿಷ್ಕರಿಸಿರುವ ವಾಟರ್ ಬೈಸಿಕಲ್ ಅತ್ಯುಪಯುಕ್ತವಾಗಿದೆ. ಜನರಿಗೆ ತಲುಪಿದರೆ ಬಹಳ ಖುಷಿಯಾಗಲಿದೆ
ಪ್ರಶಾಂತ ಕಡಿ
ಮಾರ್ಗದರ್ಶಕ
* *
ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ, ಆರ್ಕಿಮಿಡಿಸ್ ತತ್ವದನ್ವಯ ನೀರಿನಲ್ಲಿ ಚಲಿಸುವ ಬೈಸಿಕಲ್ ಆವಿಷ್ಕರಿಸಿದ್ದು, ಬಹುಪಯೋಗಿಯಾಗಿದೆ. ನಮ್ಮ ಸಾಧನೆಗೆ ಪ್ರೋತ್ಸಾಹ ಬೇಕಿದೆ
ಸಂಜನಾ ಕೋಳೂರ
ವಾಟರ್ ಬೈಸಿಕಲ್ ಆವಿಷ್ಕರಿಸಿದ ವಿದ್ಯಾರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.