ನವದೆಹಲಿ: ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಸಂಬಂಧ ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ನಡುವೆ ಶುಕ್ರವಾರ ಮೊದಲ ಸಭೆ ನಡೆದಿದ್ದು, ಎರಡೂ ಕಡೆಯಿಂದ ಯಾವುದೇ ಹೆಸರನ್ನು ಪ್ರಸ್ತಾಪಿಸದೆ ಸಭೆ ಅನಿಶ್ಚಿತವಾಗಿ ಮುಕ್ತಾಯವಾಗಿದೆ.
ಈ ಸಂಬಂಧ ಕೇಂದ್ರ ಸಚಿವರಾದ ರಾಜನಾಥ ಸಿಂಗ್ ಮತ್ತು ಎಂ. ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿದ್ದಾರೆ.
ಪ್ರಮುಖ ಚುನಾವಣೆ ಕುರಿತು ಸೋನಿಯಾ ನಿವಾಸ 10 ಜನಪಥ್ಗೆ ಆಗಮಿಸಿದ್ದ ಇಬ್ಬರು ಸಚಿವರು ಸುಮಾರು 30 ನಿಮಿಷ ಕಾಲ ಸಮಾಲೋಚನೆ ನಡೆಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ನ ಮುಖಂಡ ಗುಲಾಮ್ ನಬಿ ಆಜಾದ್ ಅವರು, ‘ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರು ಯಾರದೇ ಹೆಸರನ್ನು ಪ್ರಸ್ತಾಪಿಸಿಲ್ಲ. ಬದಲಿಗೆ, ಅಭ್ಯರ್ಥಿಯ ಹೆಸರನ್ನು ಸೂಚಿಸುವಂತೆ ನಮಗೆ ಕೇಳಿದ್ದಾರೆ’ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ನ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಹಾಜರಿದ್ದರು.