ನೆಲಮಂಗಲ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 19 ಮಹಿಳೆಯರನ್ನು ನೆಲದ ಮೇಲೆ ಮಲಗಿಸಲಾಗಿದೆ.
ಇದು ನೂರು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ. ಆದರೆ, ಈಗ 40 ಹಾಸಿಗೆಗಳು ಮಾತ್ರ ಇವೆ. ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳನ್ನು ನೆಲದ ಮೇಲೆ ಮಲಗಿಸಲಾಗುತ್ತಿದೆ. ಇಲ್ಲಿ ರೋಗಿಗಳ ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿಯೂ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.
‘ಸ್ಥಳೀಯ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಇದೇ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ. ಆಸ್ಪತ್ರೆಯಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಲು ಅವರು ವಿಫಲರಾಗಿದ್ದಾರೆ. ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸಿಲ್ಲ’ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.
‘ತುರ್ತು ನಿಗಾ ಘಟಕ ಮತ್ತು ಡಯಾಲಿಸಿಸ್ ಕೇಂದ್ರದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಕಾಮಗಾರಿಯು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಬಳಿಕ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ತಾಲ್ಲೂಕಿನ ವೈದ್ಯಾಧಿಕಾರಿ ತಿಳಿಸಿದರು.