ವಿಜಯಪುರ: ಸರ್ಕಾರದ ಯೋಜನೆ ಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಲೋಕಮಂಚ, ನವಸಾನ್ನಿಧ್ಯ ಸಮಾಜ ಸೇವಾ ಸಂಸ್ಥೆ, ವಿವಿಧ ಸ್ಲಂ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಫಾ.ಜೆರಾಲ್ಡ್ ಡಿಸೋಜಾ ಮಾತನಾಡಿ ಸರ್ಕಾರ ಹಲ ಯೋಜನೆಗಳನ್ನು ಜಾರಿಗೆ ತರುತ್ತದೆ. ಆ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವುದಿಲ್ಲ. ಎಲ್ಲ ಸರ್ಕಾರಿ ಯೋಜನೆಗಳಿಗೆ ಶಾಸಕರೇ ಅಧ್ಯಕ್ಷರಾಗಿರುವುದರಿಂದ ಆ ಯೋಜನೆಗಳು ಶಾಸಕರ ಬೆಂಬಲಿಗರಿಗೆ ಹಾಗೂ ಅವರು ಗುರುತಿಸಿದ ಜನರಿಗೆ ಮಾತ್ರ ತುಲುಪುತ್ತಿವೆ. ಇದರಿಂದ ನಿಜ ವಾದ ಫಲಾನುಭವಿಗಳಿಗೆ ಅನ್ಯಾಯವಾ ಗುತ್ತಿದೆ ಎಂದು ದೂರಿದರು.
ಇನ್ನೂ ಹಲ ಕುಟುಂಬಗಳು ಪಡಿತರ ಚೀಟಿಗಳಿಂದ ವಂಚಿತರಾಗಿದ್ದು, ಚೀಟಿಗಾಗಿ ಕಳೆದ ಒಂಭತ್ತು ತಿಂಗಳಿಂದ ಅರ್ಜಿ ಸಲ್ಲಿಸಿದ್ದರೂ ಪಡಿತರ ಚೀಟಿ ದೊರೆಯುತ್ತಿಲ್ಲ. ಇದರಿಂದ ಸರ್ಕಾರದ ವಿವಿಧ ಯೋಜನೆಗಳಿಗೆ ಪಡಿತರ ಚೀಟಿ ಅವಶ್ಯವಾಗಿದ್ದು, ಅದು ಇಲ್ಲದೇ ಇರುವುದರಿಂದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಆದಷ್ಟು ಬೇಗನೆ ಸಂಬಂಧಿಸಿದ ಇಲಾಖೆಯವರು ಬೇಗನೆ ಪಡಿತರ ಕಾರ್ಡ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿ ರಾಜಕೀಯ ವ್ಯಕ್ತಿಗಳ ಮಧ್ಯಸ್ಥಿಕೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದು. ಸಕಾಲಕ್ಕೆ ಪಿಂಚಣಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ವಿವಿಧ ಸ್ಲಂ ಅಭಿವೃದ್ಧಿ ಸಂಘಟನೆಗಳ ಪ್ರಮುಖರಾದ ಅಕ್ರಂ ಮಾಶ್ಯಾಳಕರ, ನಿರ್ಮಲಾ ಹೊಸಮನಿ, ಫರ್ಜಾನಾ ಜಮಾದಾರ, ಕವಿತಾ, ಪಾರುಬಾಯಿ, ಸುಶೀಲಾ, ವಾಲುಬಾಯಿ, ದೀಪಾ, ಶೋಭಾ ಗಾಯಕವಾಡ, ಸಿದ್ದಲಿಂಗಯ್ಯ ಹಿರೇಮಠ, ಚಂದ್ರಕಾಂತ ಆಲಮೇಲ ಕರ, ರಫೀಕ, ಲಾಲಸಾಬ, ರೇಷ್ಮಾ, ಇಬ್ರಾಹಿಂಸಾಬ್ ಮಸಗನಾಳ, ಮಂಜುಳಾ ಸುಬೇದಾರ, ಕಸ್ತೂರಬಾಯಿ ಶಿಂಗೆ, ಶೀಲಾ, ಚಂದ್ರವ್ವ ಮಾದರ, ಈಶ್ವರ ರಾಠೋಡ, ಅಮೀನಾ ನದಾಫ, ದನ್ನು ದಲಾಲ, ಶಾನುಬಾಯಿ, ಸೋನುಬಾಯಿ, ಜಯಶ್ರೀ ಕುಲಕರ್ಣಿ, ವಿಮಲಾ ಹೊಸಮನಿ, ಲಕ್ಷ್ಮೀಬಾಯಿ ಮಾದರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.