ಶೃಂಗೇರಿ: ತಾಲ್ಲೂಕಿನ ಬುಕ್ಕುಡಿಬೈಲು ಹಾಗೂ ನೆಮ್ಮಾರ್ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ, ಎಸ್.ಪಿ ಅಣ್ಣಾಮಲೈ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಾಗಪ್ರಿಯಾ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬುಕ್ಕುಡಿಬೈಲಿನಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಹಲವು ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು.
ನೆಮ್ಮಾರಿನಲ್ಲಿರುವ ನ್ಯಾಯಬೆಲೆ ಅಂಗಡಿಗೆ ಬರುವ ಅಕ್ಕಿ, ಸೀಮೆಎಣ್ಣೆ ಮೊದಲಾದ ಪಡಿತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕಷ್ಟವಾ ಗುತ್ತಿದೆ. ಹಂಚಿನಕೂಡಿಗೆ, ಆವಗೆ, ಬುಕ್ಕಡಿಬೈಲು, ಮಲ್ನಾಡ್ ಮೊದಲಾದ ಕಡೆಗಳಲ್ಲಿ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸವಾಗಿದ್ದು, ಅರ್ಥಿಕವಾಗಿ ಬಡಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಪ್ರತಿ ತಿಂಗಳ ಪಡಿತರವನ್ನು ತೆಗೆದು ಕೊಂಡು ಹೋಗಲು ₹ 150ಕ್ಕಿಂತ ಹೆಚ್ಚು ಹಣವನ್ನು ಸಾಗಾಣಿಕೆಗೆ ನೀಡಬೇಕಾಗಿದೆ. ಬುಕ್ಕುಡಿಬೈಲಿಗೆ ನ್ಯಾಯಬೆಲೆ ಅಂಗಡಿ ಬೇಕು ಎಂದು ಅಲ್ಲಿನ ಗ್ರಾಮಸ್ಥರು ತಮ್ಮ ಗೋಳನ್ನು ಹೇಳಿಕೊಂಡರು.
‘ಈಶ್ವರ ದೇವಾಲಯಕ್ಕೆ ರಸ್ತೆ ಸಂಪರ್ಕ ಹಾಗೂ ಹೆಮ್ಮಿಗೆ-ತಲಗಾರು ನಡುವೆ ಪ್ರಸ್ತುತ ಇರುವ ಕಾಲು ಸಂಕ ವಿದ್ದು ಅದನ್ನು ಸೇತುವೆ ಮಾಡಿಕೊಡಬೇಕು ಹಾಗೂ ಬುಕ್ಕುಡಿಬೈಲಿನಲ್ಲಿ ದಾದಿಯರ ಕೊರತೆಯಿದ್ದು ಕೂಡಲೇ ಎ.ಎನ್. ಎಂ (ನರ್ಸ್) ಅವರನ್ನು ನೇಮಕ ಮಾಡಿಕೊಡಬೇಕು’ ಎಂದು ಸಾರ್ವಜ ನಿಕರು ಬೇಡಿಕೆಯನ್ನು ಸಲ್ಲಿಸಿದರು.
ನೆಮ್ಮಾರಿನ ಸರ್ಕಾರಿ ಪ್ರೌಢಶಾಲೆಯ ಕುವೆಂಪು ಮಂದಿರದಲ್ಲಿ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ‘ಒಳನಾಡು ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಮುಂದಿನ ದಿನಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ-169ರ ವಿಸ್ತರಣೆ ಕುರಿತು ಬೆಂಗಳೂರಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಕೆರಕಟ್ಟೆ ದ್ಯಾವಂಟು ರಮೇಶ್ ಅವರ ತೋಟವನ್ನು ಅರಣ್ಯ ಇಲಾಖೆ ಕಡಿದಿದ್ದು ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದರು.
ಕೆರೆಕಟ್ಟೆಯ ಪ್ರಭಾಕರ್ ಹೆಬ್ಬಾರ್ ಮಾತನಾಡಿ ‘ತೋಟದ ಮಿಶ್ರಬೆಳೆಗಳ ಮೌಲ್ಯಮಾಪನವನ್ನು ತೋಟಗಾರಿಕಾ ಇಲಾಖೆಯವರು ಮಾಡಿಲ್ಲ. ನಮಗೆ ಸರ್ಕಾರ ನೀಡಿದ ಪರಿಹಾರ ಅತ್ಯಲ್ಪ’ ಎಂದರು.
ನೆಮ್ಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಮಾತನಾಡಿ, ‘ ಹಲವು ವರ್ಷಗಳಿಂದ ನೆಮ್ಮಾರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು 32 ಕುಟುಂಬಗಳಿವೆ. ಕುಡಿ ಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗದಿಂದ ಎರಡು ವರ್ಷಗಳ ಹಿಂದೆ ಅಂದಾಜುಪಟ್ಟಿಯನ್ನು ಜಿಲ್ಲಾಧಿಕಾರಿ ಅವರಿಗೆ ನೀಡಲಾಗಿದೆ.
ಆದರೆ ಇದುವರೆಗೂ ಕೆಲಸವಾಗಿಲ್ಲ. ಕೆರೆಕಟ್ಟೆ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು ಅವರು ಪಡಿತರ ಪಡೆದುಕೊಳ್ಳಲು ನೆಮ್ಮಾರಿಗೆ 12 ಕಿ.ಮೀ ದೂರದಿಂದ ಬರಬೇಕಾಗಿದೆ’ ಎಂದರು.
ಸಭೆಯಲ್ಲಿ ತಹಶಿಲ್ದಾರ್ ಪದ್ಮನಾಭ ಶಾಸ್ತ್ರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಶಿವಶಂಕರ್,ಶಿಲ್ಪಾರವಿ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್ ಸದಸ್ಯರಾದ ಪುಷ್ಪ, ಕೆ.ಆರ್.ವೆಂಕಟೇಶ್,ಕೆರೆಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಗೋಪಾ ಲಕೃಷ್ಣ, ನೆಮ್ಮಾರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ವಿವಿಧ ಬೇಡಿಕೆಗಳಿಗೆ ಮನವಿ
ಶೃಂಗೇರಿ: ‘ಬ್ಯಾಂಕ್ ಮ್ಯಾನೇಜರ್ ಸಾಲ ವಸೂಲಾತಿಗೆ ರೈತರಿಗೆ ಒತ್ತಡ ತರುವುದು. ನೋಟಿಸ್ ನೀಡದೇ ಅರಣ್ಯ ಇಲಾಖೆಯವರು ರೈತರ ತೋಟ ನುಗ್ಗಿ ನಾಶಮಾಡುವುದು,ರೈತರ ತೋಟಗಳ ಮೌಲ್ಯಮಾಪನವನ್ನು ಜಿಲ್ಲಾಧಿಕಾರಿಗಳು ಕಡಿಮೆ ಮಾಡುವ ಪ್ರಕ್ರಿಯೆಗಳಿಂದ ಮಲೆನಾಡಿನ ರೈತರಿಗೆ ತುಂಬಾ ಅನ್ಯಾಯವಾಗಿದೆ.
ನೊಂದ ರಮೇಶ್ ಅವರಿಗೆ ₹ 1 ಕೋಟಿ ಪರಿಹಾರ ನೀಡಬೇಕು ಹಾಗೂ ಎಸಿಎಫ್ ಹಾಗೂ ರೇಂಜರ್ ಅವರನ್ನು ಕೂಡಲೇ ಆಮಾನತು ಮಾಡಬೇಕು’ ಎಂದು ಸಚಿನ್ ಮೀಗಾ ಅವರು ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯವತಿಯನ್ನು ಒತ್ತಾಯಿಸಿದರು.
* *
ಕೆರೆಕಟ್ಟೆಯಲ್ಲಿ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ಸ್ತ್ರೀಶಕ್ತಿಗುಂಪುಗಳು ಮುಂದೆ ಬಂದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು.
ಜಿ.ಸತ್ಯವತಿ
ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.