ಸೋಲೂರು(ಮಾಗಡಿ): ಎತ್ತಿನಹೊಳೆ ಯೋಜನೆಯಿಂದ ಎರಡು ವರ್ಷದ ಒಳಗೆ ಬಯಲು ಸೀಮೆಯ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವುದು ನೂರಕ್ಕೆ ನೂರು ಸತ್ಯ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ತಿಳಿಸಿದರು,ಮಲ್ಲೂರಿನಲ್ಲಿ ಶುಕ್ರವಾರ ನಡೆದ ವೀರಭದ್ರೇಶ್ವರ ಸ್ವಾಮಿ ನೂತನ ಆಲಯ ಪುನರ್ ಪ್ರತಿಷ್ಠಾಪನಾ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.
‘ನಿಸರ್ಗದ ಮಡಿಲಲ್ಲಿ ಮನೆ ಮಾಡಿರುವ ಮಾನವ, ಅಂತರಂಗದಲ್ಲಿ ಶೀಲ ಸಂವರ್ಧನೆ ಮಾಡಿಕೊಂಡರೆ ನಮ್ಮೊಳಗೆ ದೇವರನ್ನು ಕಾಣಬಹುದು, ಮಕ್ಕಳಿಗೆ ವಿದ್ಯೆ–ಸಂಸ್ಕಾರವನ್ನು ಕಲಿಸುವುದು ಮುಖ್ಯ, ಸಮಾನತೆ ಸೌಹಾರ್ದತೆ ಮತ್ತು ದೇಶಾಭಿಮಾನವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಬೇಕು’ ಎಂದರು.
‘ಮಕ್ಕಳನ್ನು ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಅವರಂಥ ದೇಶಭಕ್ತರನ್ನಾಗಿಸಲು ತಾಯಂದಿರು ಶ್ರಮಿಸಬೇಕು. ಮಲ್ಲೂರು ಬಳಿ ಬಸ್ ತಂಗುದಾಣ ನಿರ್ಮಿಸಿ, ದೇಗುಲದ ಜೀರ್ಣೋದ್ಧಾರಕ್ಕೆ ₹10 ಲಕ್ಷ ನೀಡಿದ್ದೇನೆ ಎಂದರು.
‘ಬೊಮ್ಮನಹಳ್ಳಿ ಮತ್ತು ಅಂಕನ ಹಳ್ಳಿ ನಡುವಿನ ರಸ್ತೆಗೆ ಡಾಂಬರೀಕರಣ ಮಾಡಿಸುತ್ತೇನೆ’ ಎಂದು ತಿಳಿಸಿದರು. ದೇಗುಲ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎನ್.ಪ್ರಕಾಶ್ ಅವರನ್ನು ವೀರಪ್ಪ ಮೊಯಿಲಿ ಸನ್ಮಾನಿಸಿದರು, ಶಿವಗಂಗೆ ಮೇಲಣ ಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯರು ಮಾತನಾಡಿ, ಸ್ವಚ್ಛ ಗ್ರಾಮದಲ್ಲಿ ದೇವರು ನೆಲೆಸಿರುತ್ತಾನೆ. ದೇಹವೇ ದೇಗುಲವಾಗಬೇಕು. ಮನೆ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು ಮಕ್ಕಳಿಗೆ ಅಕ್ಷರ ಕಲಿಸಿ ಎಂದರು.
ಪ್ರಕೃತಿಯ ಮುಂದೆ ಪ್ರಧಾನ ಮಂತ್ರಿ ಮತ್ತು ಎಲ್ಲರೂ ಗೌಣ. ಎತ್ತಿನ ಹೊಳೆ ಒಂದು ಉತ್ತಮ ಯೋಜನೆಯಾಗಿದೆ. ದೀನರ ಸೇವೆಯೇ ದೇವರ ಸೇವೆ ಎಂಬುದನ್ನು ಮರೆಯಬಾರದು ಎಂದು ವಿಜಯ ನಗರ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ತಿಳಿಸಿದರು, ಮಾಜಿ ಸಚಿವ ಆಂಜನಮೂರ್ತಿ, ಮಾಜಿ ಶಾಸಕ ನಾಗರಾಜು ಮಾತನಾಡಿದರು.
ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್.ಗೌಡ, ಮೋಟ ಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಜಯರಾಮ್, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯಪ್ಪ,ಮಾಜಿ ಸದಸ್ಯ ಕಾಂತ ರಾಜ್, ಮಲ್ಲೂರಿನ ಗೌರಮ್ಮನಾಗರಾಜು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್, ಎಂ.ಎಸ್. ಬೈರೇಗೌಡ, ಸಿ.ಗೋಪಾಲ್, ಟಿ.ಸಿದ್ದಗಂಗಯ್ಯ, ಎಂ.ಜಿ.ಶ್ರೀನಿವಾಸ್, ಎಂ.ಜಿ. ಸಿದ್ದಪ್ಪ, ಮೋಹನ್ ಕುಮಾರ್, ಗಂಗಹನುಮಯ್ಯ,ಮ ಚಂದ್ರಯ್ಯ, ವೆಂಕಟಪ್ಪ, ಕೆಂಪಮ್ಮ ಗಂಗಮಾರಯ್ಯ, ಜಯಮ್ಮ ನರಸಿಂಹಯ್ಯ, ಮೋಟಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಮಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಹಾಗೂ ದಾನಿಗಳು ಇದ್ದರು.
* *
ಮಕ್ಕಳ ಮುಂದೆ ಮನೆಯಲ್ಲಿ ಜಗಳ ಮಾಡಬೇಡಿ. ಮಕ್ಕಳಲ್ಲಿ ಯಾರೂ ದಡ್ಡರಿಲ್ಲ, ಮಗುವನ್ನು ಹಣ ಗಳಿಸುವ ಯಂತ್ರಗಳನ್ನಾಗಿ ಮಾಡದಿರಿ
ವೀರಪ್ಪ ಮೊಯಿಲಿ
ಸಂಸದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.