ಲಖನೌ: ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವಿನ ತನಿಖೆಯನ್ನು ಸಿಬಿಐ ಆರಂಭಿಸಿದೆ.
ಸಂಸ್ಥೆಯ ಅಧಿಕಾರಿಗಳು ಶನಿವಾರ ಸ್ಥಳೀಯ ಪೊಲೀಸರಿಂದ ಎಫ್ಐಆರ್, ಸಿಸಿಟಿವಿ ದೃಶ್ಯಾವಳಿ ಮತ್ತಿತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು.
ತಿವಾರಿ ಅವರು ಸತ್ತು ಬಿದ್ದಿದ್ದ ಸ್ಥಳ ಮತ್ತು ಉಳಿದುಕೊಂಡಿದ್ದ ಅತಿಥಿ ಗೃಹಕ್ಕೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಿ ಸತ್ಯ ಸಂಗತಿಗಳನ್ನು ತಿಳಿಸುತ್ತೇನೆ ಎಂದು ತಿವಾರಿ ಅವರ ಸಹೋದರ ಮಯಾಂಕ್ ತಿವಾರಿ ತಿಳಿಸಿದ್ದಾರೆ.
ತಿವಾರಿ ಅವರು ಒಂದು ತಿಂಗಳ ಹಿಂದೆ ಲಖನೌ ಅತಿಥಿ ಗೃಹದ ಬಳಿ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಅವರ ಮರಣೋತ್ತರ ಪರೀಕ್ಷೆ ಅಪೂರ್ಣಗೊಂಡಿದ್ದು, ಒಳಾಂಗಗಳ ಮಾದರಿಯನ್ನು ವೈದ್ಯರು ಕಾಯ್ದಿರಿಸಿದ್ದಾರೆ. ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋ ಗಾಲಯಕ್ಕೆ ಕಳುಹಿಸಲಾಗುತ್ತದೆ.
ಸಾವಿನ ತನಿಖೆಗೆ ಉತ್ತರಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ ಈ ತಂಡದ ತನಿಖೆಯಿಂದ ಯಾವುದೇ ಖಚಿತ ಫಲಿ
ತಾಂಶ ಹೊರಬಿದ್ದಿಲ್ಲ. ನಂತರ ರಾಜ್ಯ ಸರ್ಕಾರ ತನಿಖೆ ನಡೆಸುವಂತೆ ಸಿಬಿಐನ್ನು ಕೋರಿದೆ.