ನವದೆಹಲಿ: ರಾಷ್ಟ್ರಪತಿ ಭವನದೊಳಗಿನ ಹಲವು ಕೊಳಗಳು ನಿಂತ ನೀರಿನಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿ ಪರಿವರ್ತಿತವಾಗಿವೆ. ಇದನ್ನು ಗಮನಿಸಿದ ನವದೆಹಲಿ ಮಹಾನಗರಪಾಲಿಕೆ (ಎನ್ಡಿಎಂಸಿ) ಹಲವು ನೋಟಿಸ್ಗಳನ್ನು ಜಾರಿ ಮಾಡಿದೆ.
ಅತಿಗಣ್ಯರ ಲುಟೆನ್ಸ್ ವಲಯದಲ್ಲಿರುವ ಈ ಭವನಕ್ಕೆ ಎನ್ಡಿಎಂಸಿ ಕಣ್ಗಾವಲು ತಂಡ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಅಲ್ಲಿನ ವಿವಿಧ ಕಟ್ಟಡಗಳು ಮತ್ತು ವಸತಿ ನಿವಾಸಗಳಿಗೆ ಈವರೆಗೆ 1,100ಕ್ಕೂ ಹೆಚ್ಚು ನೋಟಿಸ್ಗಳು ಹಾಗೂ 13 ಚಲನ್ಗಳನ್ನು ಜಾರಿ ಮಾಡಲಾಗಿದೆ.
‘ಪ್ರತಿ ವರ್ಷ ನಮ್ಮ ಕಣ್ಗಾವಲು ತಂಡಗಳು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡುತ್ತವೆ. ಎರಡನೇ ಭೇಟಿ ವೇಳೆ ಪರಿಸ್ಥಿತಿ ಸುಧಾರಿಸದಿದ್ದರೆ ಚಲನ್ಗಳನ್ನು ಕಳುಹಿಸುತ್ತೇವೆ’ ಎಂದು ಎನ್ಡಿಎಂಸಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಎನ್ಡಿಎಂಸಿಯು ರಾಷ್ಟ್ರಪತಿ ಭವನದ ಸುತ್ತಲಿನ ಕಟ್ಟಡಗಳಿಗೆ 80ಕ್ಕೂ ಹೆಚ್ಚು ಹಾಗೂ 2015ರಲ್ಲಿ 125 ನೋಟಿಸ್ಗಳನ್ನು ಜಾರಿ ಮಾಡಿತ್ತು. ಈ ವರ್ಷ ಜಾರಿ ಮಾಡಿರುವ ನೋಟಿಸ್ಗಳ ನಿಖರ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ.
ರಾಷ್ಟ್ರಪತಿ ಭವನದಂತೆಯೇ ರಕ್ಷಣಾ ಸಚಿವಾಲಯ ಮತ್ತು ದೆಹಲಿ ಹೈಕೋರ್ಟ್ ಗೂ ಸೊಳ್ಳೆಗಳ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಇದಲ್ಲದೆ ಹರಿಯಾಣ ಭವನ, ಪರ್ಯಾವರಣ ಭವನ, ಮ್ಯೂಸಿಯಂ ಭವನ, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ), ಸಫ್ದರ್ಜಂಗ್ ಆಸ್ಪತ್ರೆ, ಏಮ್ಸ್, ದೆಹಲಿ ಪೊಲೀಸ್ ಪ್ರಧಾನ ಕಚೇರಿ ಹಾಗೂ ರಾಮಮನೋಹರ ಲೋಹಿಯಾ ಆಸ್ಪತ್ರೆಗಳೂ ನೋಟಿಸ್ ಪಡೆದಿವೆ.