ಹನೂರು: ಜಿಂಕೆಗಳ ಬೇಟೆಗೆ ಉರುಳು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿದ ಅರಣ್ಯಾಧಿಕಾರಿಗಳು ಕಳ್ಳಬೇಟೆಗಾರರ ಪತ್ತೆಗಾಗಿ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಕಾವೇರಿ ವನ್ಯಧಾಮದಲ್ಲಿ ಕಿಡಿಗೇಡಿಗಳು ಹಾಕಿದ್ದ ಉರುಳಿಗೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಜಿಂಕೆ ಗಳನ್ನು ಯುವಕರು ಬಿಡಿಸಿ ಪ್ರಾಣಾ ಪಾಯದಿಂದ ಪಾರು ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಾಗಿ ಹರಿದಾಡಿ ಜಿಲ್ಲೆಯಲ್ಲಿ ಸಂಚಲನ ಉಂಟು ಮಾಡಿತ್ತು.
ಈ ಸಂಬಂಧ ಪ್ರಜಾವಾಣಿಯಲ್ಲಿ ಜೂನ್ 15 ರಂದು ‘ಜಿಂಕೆ ರಕ್ಷಣೆಯ ವಿಡಿಯೊ ವೈರಲ್’ ಎಂಬ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಹಾಗೂ ವಲಯ ಅರಣ್ಯಾಧಿಕಾರಿ ಬಿ.ಸಿ. ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೌದಳ್ಳಿ ವನ್ಯಜೀವಿ ವಲಯದ ಚಿಕ್ಕಲ್ಲೂರು ಬೀಟ್ನ ಬಸವನತ್ತ ಅರಣ್ಯ ಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಅರ್ಧ ಕಿ.ಮೀ ಅಂತರದಲ್ಲಿ 17 ಕಡೆ ಗಳಲ್ಲಿ ಉರುಳು ಹಾಕಿರುವುದು ಪರಿಶೀಲನೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
‘ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಉರುಳು ಹಾಕಿದ್ದು ಪತ್ತೆಯಾಗಿದೆ. ಸುದ್ದಿ ತಿಳಿದು ಸ್ಥಳ ಪರಿಶೀಲನೆ ನಡೆಸ ಲಾಗಿದೆ. ಸಿಬ್ಬಂದಿಯಿಂದ ಸುತ್ತಮುತ್ತಲ ಬೀಟ್ಗಳಲ್ಲೂ ಸಹ ಪರಿಶೀಲನೆ ನಡೆಸಲಾಗಿದೆ. ಬೇರೆ ಯಾವ ಭಾಗದಲ್ಲೂ ಕಂಡು ಬಂದಿಲ್ಲ.
ಇದಕ್ಕೆ ಸಂಬಂಧಿಸಿ ದಂತೆ ಕೆಲವು ಗ್ರಾಮಗಳ ಜನರ ಮೇಲೆ ಸಂದೇಹ ವಿದ್ದು, ಇಲಾಖೆ ವತಿಯಿಂದಲೇ ಸ್ವಯಂ ದೂರು ದಾಖಲಿಸಿ ಕೊಳ್ಳಲಾಗಿದೆ. ತ್ವರಿತಗತಿಯಲ್ಲಿ ಕಾರ್ಯಾ ಚರಣೆ ಕೈಗೊಂಡು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸ ಲಾಗುವುದು’ ಎಂದು ಅರಣ್ಯಾಧಿಕಾರಿ ಗಳು ತಿಳಿಸಿದರು.
ಒಂದು ವರ್ಷದ ಹಿಂದೆ ಗೋಪಿ ನಾಥಂ ವನ್ಯಜೀವಿ ವಲಯದ ಆಲಂ ಬಾಡಿ ಬೀಟ್ನಲ್ಲೂ ಸಹ ಇಂಥ ಪ್ರಕರಣ ನಡೆದಿತ್ತು ಎಂಬುದನ್ನು ಅರಣ್ಯಾಧಿಕಾರಿ ಗಳು ತಿಳಿಸಿದ್ದಾರೆ. ಕಾವೇರಿ ನದಿಯನ್ನು ದಾಟಿ ಅಕ್ರಮವಾಗಿ ಅರಣ್ಯ ಪ್ರವೇಶಿಸುವ ಕೆಲ ತಮಿಳಿಗರು ಜಿಂಕೆಯ ಚರ್ಮ ಹಾಗೂ ಮಾಂಸಕ್ಕಾಗಿ ಉರುಳು ಹಾಕುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಆರೋಪಿ ಗಳನ್ನು ಬಂಧಿಸಲಾಗಿತ್ತು ಎಂದು ಹೇಳಿದರು.
ಪುನಃ ಇಂತಹ ಪ್ರಕರಣ ಹನೂರು ವಲಯದಲ್ಲಿ ನಡೆಯುತ್ತಿದೆ. ಜಿಂಕೆಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಯುವಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ಕುಮಾರ್ ಅವರು ‘ಪ್ರಜಾವಾಣಿಗೆ’ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.