ಶಿರಸಿ: ರಾಷ್ಟ್ರಪತಿ ಗೋಜು ನನಗೆ ಬೇಡ. ರಾಜ್ಯದಲ್ಲಿ ಪಕ್ಷ ಬಲಗೊಳಿಸಲು ಜನರೆದುರು ಕೈಚಾಚಬೇಕಾಗುತ್ತದೆ. ಅದನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕುಳಿತು ಮಾಡಲು ಸಾಧ್ಯವಿಲ್ಲ ಎಂದು ಎಚ್.ಡಿ. ದೇವೇಗೌಡ ಸೋಮವಾರ ತಿಳಿಸಿದರು.
ಇಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇನೆ, ಪಕ್ಷಕ್ಕೆ ಶಕ್ತಿ ಇದೆಯೋ ಇಲ್ಲವೋ ಅಳೆಯುವುದಿಲ್ಲ. ಶಕ್ತಿ ಇದೆ ಎಂದೇ ಭಾವಿಸಿ ಹೋಗುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಜಿಲ್ಲೆಯಲ್ಲಿ ಇದ್ದಾರೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಪಕ್ಷ ಬಲಾಢ್ಯವಾಗಿದೆ. ಪಕ್ಷ ತೊರೆದವರ ಬಗ್ಗೆ ಚಿಂತೆಯಿಲ, ಇನ್ನು ಎಂಟು ತಿಂಗಳಿಗೆ ಚುನಾವಣೆ ಬರಲಿದೆ. ಅಷ್ಟರಲ್ಲಿ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷ ಸಂಘಟನೆಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.
ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಈ ಹಿಂದೆ ನಡೆದ ನಾಲ್ಕು ರಾಜ್ಯಗಳ ಚುನಾವಣೆ ವೇಳೆ ಪೈಪೋಟಿ ಮೇಲೆ ಭಾಷಣ ಮಾಡಿದವು ಅಷ್ಟೆ. ಈಗ ಉತ್ತರ ಪ್ರದೇಶದಲ್ಲಿ ಸಾಲಮನ್ನಾ ಘೋಷಣೆ ಆಗಿದೆ. ಆದರೆ ಕಾರ್ಯಗತವಾಗಿಲ್ಲ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ದೂಷಣೆ ಮಾಡುತ್ತಿದೆ. ಅರ್ಧ ಕೊಟ್ಟರೆ ನಾವು ಕೊಡುತ್ತೇವೆ ಎಂದು. ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಎಲ್ಲ ಆರ್ಥಿಕ ಸಂಸ್ಥೆಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು ಎಂದು ದೇವೇಗೌಡ ತಿಳಿಸಿದರು.