ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ, ಚಿಕುನ್‌ಗುನ್ಯಾ ಕಾಯಿಲೆ ಉಲ್ಬಣ

ರಾಮನಗರ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಬಾಧೆ: ಹಳ್ಳಿಗಳಲ್ಲಿ ಜ್ವರಪೀಡಿತರ ಸಂಖ್ಯೆ ತೀವ್ರ ಹೆಚ್ಚಳದಿಂದ ಆತಂಕ
Last Updated 1 ಜುಲೈ 2017, 6:16 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತಿವೆ. ಡೆಂಗಿ, ಮಲೇರಿಯಾ, ಚಿಕುನ್‌ಗುನ್ಯಾ, ವೈರಾಣು ಜ್ವರ ಮೊದಲಾದ ರೋಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದೆ.

ಹಲವು ಗ್ರಾಮಗಳಲ್ಲಿ ಹತ್ತಾರು ಮಂದಿ ಒಮ್ಮೆಲೆ ಜ್ವರ ಪೀಡಿತರಾಗಿದ್ದಾರೆ. ಈವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಮಂದಿ ರಾಮನಗರ ಹಾಗೂ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ವರ್ಷ ಒಟ್ಟು 10 ಡೆಂಗಿ ಪ್ರಕರಣಗಳು ಪತ್ತೆ ಆಗಿದ್ದು, ಕಳೆದ ಹದಿನೈದು ದಿನದ ಅವಧಿಯಲ್ಲಿ ಈ ರೋಗಕ್ಕೆ ಇಬ್ಬರು ಬಲಿಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕನಕಪುರ ತಾಲ್ಲೂಕಿನ ಸಾತನೂರು ಸಮೀಪದ ದೊಂಬರದೊಡ್ಡಿ ಗ್ರಾಮದ ಅಭಿಷೇಕ್ ಹಾಗೂ ರಾಮನಗರದ ನಿವಾಸಿ ನಿಸರ್ಗಾ ಎಂಬುವರು ಈ ಜ್ವರಬಾಧೆಯಿಂದ ಮೃತಪಟ್ಟಿದ್ದಾರೆ.

ಕಳೆದ 4ತಿಂಗಳ ಅವಧಿಯಲ್ಲಿ ರೇಬಿಸ್ ಕಾಯಿಲೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಉಳಿದಂತೆ ಮಾಗಡಿ ತಾಲ್ಲೂಕಿನ ಕುದೂರು, ಉಜುಗಲ್ಲು, ಚನ್ನಪಟ್ಟಣದ ಮಾದರಹಳ್ಳಿ ಗ್ರಾಮ ಗಳಲ್ಲಿ ವಿಪರೀತ ಜ್ವರ ಪತ್ತೆ ಯಾಗಿದೆ. ಮೆದುಳು ಸಂಬಂಧಿ ಜ್ವರ, ಡೆಂಗಿ, ಮಲೇರಿಯಾ, ಕಾಲರಾ, ವಿಷಮ ಶೀತ ಜ್ವರ, ದಡಾರ, ರೇಬಿಸ್, ಪ್ಲೇಗ್, ಬೊಕ್ಕೆ ರೋಗ, ಸಿಡುಬು ಇತರೆ ರೋಗಗಳು ಸಾಂಕ್ರಾಮಿಕ ರೋಗಗಳ ಸಾಲಿಗೆ ಬರಲಿವೆ.

ಶುಚಿತ್ವದ ಬಗ್ಗೆ ತಾತ್ಸಾರ: ಸಾಂಕ್ರಾಮಿಕ ರೋಗಗಳು ಹರಡಲು ಅನೈರ್ಮಲ್ಯ ಕಾರಣ ಎಂಬುದು ಜನರಿಗೆ ಗೊತ್ತಿದ್ದರೂ, ಸ್ವಚ್ಛತೆ ಬಗ್ಗೆ ತಾತ್ಸಾರ ವಹಿಸಲಾಗುತ್ತಿದೆ. ಚರಂಡಿ, ಮೋರಿಗಳ ಸ್ವಚ್ಛತೆ ಮಾಡುವುದು, ಡೆಂಗಿ ಹರಡುವ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸುವ ಜನತೆ ಆರೋಗ್ಯ ಇಲಾಖೆ ಅಧಿಕಾರಿಗಳ ಮನವಿಗೆ ಕಿವಿಗೊಡುತ್ತಿಲ್ಲ.

ಮತ್ತೊಂದೆಡೆ ಶುಚಿತ್ವದ ಬಗ್ಗೆ ಗಮನ ಹರಿಸಬೇಕಾದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಗಳು ಕೈಚೆಲ್ಲಿ ಕುಳಿತಿವೆ. ಕುಡಿಯುವ ನೀರಿನ ಪೈಪ್‌ಗಳು, ಟ್ಯಾಂಕ್‌ಗಳ ಬಗ್ಗೆ ಅಷ್ಟಾಗಿ ಗಮನ ಹರಿಸುತ್ತಿಲ್ಲ. ನೀರು ನಿಲ್ಲಿಸಿದ ನಂತರ ತ್ಯಾಜ್ಯದ ಜತೆ ಮಿಶ್ರಣವಾಗಿ ನಲ್ಲಿಗಳ ಮೂಲಕ ಮನೆ ಸೇರುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹಲವು ಗ್ರಾಮಗಳ ಗ್ರಾಮಸ್ಥರು ದೂರುತ್ತಾರೆ.

ಆರೋಗ್ಯ ಇಲಾಖೆ, ಪಂಚಾಯಿತಿ ಕಾರ್ಯಗಳೇನು?: ಜನರ ಆರೋಗ್ಯ ರಕ್ಷಣೆಗಾಗಿ 5 ಸಾವಿರಕ್ಕೊಬ್ಬರು ಕಿರಿಯ ಆರೋಗ್ಯ ಸಹಾಯಕರು, 10 ಸಾವಿರ ಕ್ಕೊಬ್ಬರು ಹಿರಿಯ ಆರೋಗ್ಯ ಸಹಾಯಕ ರಿದ್ದು, ಇವರ ಮೇಲೆ ಪಿಎಚ್‌ಸಿ ವೈದ್ಯ ಇರುತ್ತಾರೆ. ಪಿಎಚ್‌ಸಿ ವೈದ್ಯರು ಮಧ್ಯಾ ಹ್ನದ ವರೆಗೂ ರೋಗಿ ಗಳಿಗೆ ಚಿಕಿತ್ಸೆ ನೀಡಬೇಕು. ಮಧ್ಯಾಹ್ನ ಸಾಂಕ್ರಾಮಿಕ ರೋಗಗಳ ಬಗ್ಗೆ ಪತ್ತೆ ಹಚ್ಚಿ ತಾಲ್ಲೂಕು ಆರೋಗ್ಯಾಧಿಕಾರಿಗೆ ವರದಿ ಸಲ್ಲಿಸಬೇಕು.

ಆರೋಗ್ಯ ಸಹಾಯಕರು ಡೆಂಗಿ ಮಾಹಿತಿ ಸಿಕ್ಕಲ್ಲಿ ಲಾರ್ವ ಪತ್ತೆ ಹಚ್ಚಿ ವರದಿ ಸಲ್ಲಿಸಬೇಕು. ನೀರಿನ ಘಟಕಗಳ ವಸ್ತುಸ್ಥಿತಿ ಪರಿಶೀಲಿಸಬೇಕು. ಪಂಚಾ ಯಿತಿ ಆಧಾರದ ಮೇಲೆ ಕ್ರಮ ಕೈಗೊಳ್ಳ ಬೇಕು. ತಾಲ್ಲೂಕು ಆರೋಗ್ಯ ಇಲಾಖೆ ಪ್ರಯೋಗಾಲಯಗಳ ಮೇಲ್ವಿಚಾರಣೆ ಮಾಡಿ ಪಂಚಾಯಿತಿಗಳಿಗೆ ಒದಗಿಸ ಬೇಕು.

ಅಂತೆಯೇ, ಅನುಸೂಚಿ ಮೂರರ ಪ್ರಕಾರ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಅಲೋಪತಿ, ಆಯುಷ್, ಪ್ರಕೃತಿ ಚಿಕಿತ್ಸೆ ಸೇರಿದಂತೆ ಭಾರತೀಯ ವೈದ್ಯ ಪದ್ಧತಿ ಸೌಲಭ್ಯಗಳ ಮೇಲ್ವಿಚಾರಣೆ. ಲಸಿಕೆ ನೀಡುವ ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ಪರಿಹಾರಾತ್ಮಕ ಕ್ರಮಗಳ ಜಾರಿ ಮಾಡಬೇಕು. ರಸ್ತೆ, ವಾಸಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಹಾಗೂ ನೈರ್ಮಲ್ಯ ಕಾರ್ಯಕ್ರಮ ಅಯೋಜನೆ, ಅನುಷ್ಠಾನ ಮಾಡುವುದು ಆದ್ಯ ಕರ್ತವ್ಯ. ನೀರಗಂಟಿ ನೀರಿನ ಘಟಕ, ಮೂಲಸ್ಥಾವರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು.

ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಈ ಕೆಲಸದಲ್ಲಿ ಸಕ್ರಿಯವಾಗಿಲ್ಲ, ಪಂಚಾ ಯಿತಿ ಸದಸ್ಯರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಜನರು ದೂರುತ್ತಾರೆ.

**

ಸ್ವಚ್ಛತೆಗೆ ಆದ್ಯತೆ ನೀಡಿ

ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ್‌ ಹೆಡೆ ತಿಳಿಸಿದರು.

‘ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಇಲಾಖೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಒಂದೊಂದು ತಂಡ ರಚಿಸಿ, ಆಶಾ ಕಾರ್ಯಕರ್ತೆಯರ ಮೂಲಕ ಸರ್ವೆ ನಡೆಸಲಾಗುತ್ತಿದೆ.

ಡೆಂಗಿ ಸಂಬಂಧ ಲಕ್ಷಣಗಳು ಗೋಚರಿಸಿದರೆ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದರು.

**

ಡೆಂಗಿ ನಿಯಂತ್ರಣ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ರೋಗಪೀಡಿತರು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು.
-ಡಾ. ಶಿವರಾಜ್‌ ಹೆಡೆ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT