ಮಡಿಕೇರಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪವನೀಶ್ ಶುಕ್ರವಾರ ತಿಳಿಸಿದರು.
ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ವತಿಯಿಂದ ಬೊಟ್ಟಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವ ಅಂಗವಾಗಿ ಕಾರ್ಯಕ್ರಮ ನಡೆಯಿತು.
‘ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ, ಕಾಳಜಿ ಆಗಬೇಕು. ಪರಿಸರ ಸಂರಕ್ಷಣೆಯನ್ನು ಸರ್ಕಾರ ಅಥವಾ ಕಾನೂನಿಂದಲ್ಲೇ ಸಾಧ್ಯವಿಲ್ಲ. ಆದ್ದರಿಂದ, ಪ್ರತಿಯೊಬ್ಬರು ಈ ಬಗ್ಗೆ ಜಾಗೃತರಾಗಬೇಕು’ ಎಂದು ತಿಳಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಪಿ.ಯು.ಪ್ರೀತಂ, ‘ಇಂತಹ ಕಾರ್ಯಕ್ರಮಗಳು ಪ್ರತಿ ಶಾಲೆಗಳಲ್ಲಿ ನಡೆಯಬೇಕು. ವಿದ್ಯಾರ್ಥಿ ಜೀವನದಲ್ಲಿ ಪರಿಸರದ ಬಗ್ಗೆ ಕಾಳಜಿಬೆಳೆದಲ್ಲಿ ಉತ್ತಮ ಪ್ರಜೆಯಾಗಬಹುದು’ ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷ ಎಂ.ಪಿ.ತಿಮ್ಮಯ್ಯ, ‘ಇಂದು ಕಲುಷಿತ ಗಾಳಿ ಸೇವಿಸುವ ಪರಿಸ್ಥಿತಿ ಬಂದಿದೆ. ಈ ಸಂಬಂಧ ಸರ್ಕಾರ ಜಾಗೃತರಾಗಬೇಕು; ಸಾರ್ವಜನಿಕರು ಸಹಕರಿಸಬೇಕು’ ಎಂದರು.
ಸಹಾಯಕ ಪರಿಸರ ಅಧಿಕಾರಿ ಉಮೇದ್, ಉತ್ತಮ ಪರಿಸರವಿದ್ದಲ್ಲಿ ಮಾತ್ರ, ಆರೋಗ್ಯಯುತ ಜೀವನ ನಡೆಸ ಬಹುದು. ಜಿಲ್ಲೆಯನ್ನು ಪರಿಸರ ಮಾಲಿನ್ಯ ಮುಕ್ತ ಜಿಲ್ಲೆ ಮಾಡುವಲ್ಲಿ ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಗಂಗಮ್ಮ, ಗ್ರೀನ್ ಸಿಟಿ ಫೋರ್ಂನ ಪ್ರಮುಖ ರತನ್ ತಮ್ಮಯ್ಯ, ಅರಣ್ಯ ಇಲಾಖೆಯ ಸಿಬ್ಬಂದಿ ವಿನುತಾ, ಒಡಿಪಿ ಸಂಸ್ಥೆಯ ಜಾಯ್ಸ್ ಮೇನೆಜಸ್, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಹಾಜರಿದ್ದರು.