ಬೆಂಗಳೂರು: ‘ರಾಷ್ಟ್ರಪತಿ ಚುನಾವಣೆಯಲ್ಲಿ ನಾನು ಹರಕೆಯ ಕುರಿಯಲ್ಲ’ ಎಂದು 17 ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯ ಕಣದಲ್ಲಿರುವ ಮೀರಾ ಕುಮಾರ್ ಹೇಳಿದ್ದಾರೆ.
‘ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರನ್ನು ಕಾಂಗ್ರೆಸ್ ಹರಕೆಯ ಕುರಿಯಂತೆ ಬಳಸಿಕೊಳ್ಳುತ್ತಿದೆ’ ಎಂದು ಕೇಂದ್ರ ಸಚಿವ ಹಾಗೂ ಆರ್ಪಿಐ ಮುಖಂಡ ರಾಮ್ದಾಸ್ ಅಠಾವಳೆ ಹೇಳಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡುರುವ ಮೀರಾ ಕುಮಾರ್, ‘ಆದರ್ಶಗಳಿಗಾಗಿ ಹೋರಾಡುವ ಯಾರೂ ಕೂಡಾ ಹರಕೆಯ ಕುರಿಯಾಗುವುದಿಲ್ಲ. ನಾನು ಒಬ್ಬ ಹೋರಾಟಗಾರ್ತಿ. ನಾನು ಹೋರಾಡುತ್ತೇನೆ. ನನ್ನ ಹೋರಾಟಕ್ಕೆ ಹಲವರು ಕೈಜೋಡಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ತಿಳಿಸಿದ್ದಾರೆ.
ಈ ಚುನಾವಣೆಯನ್ನು ‘ದಲಿತ ವರ್ಸಸ್ ದಲಿತ’ ಎಂದು ಬಿಂಬಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇಶದ ಉನ್ನತ ಸ್ಥಾನಕ್ಕಾಗಿ ನಡೆಯುವ ಚುನಾವಣೆಯನ್ನು ಹೀಗೆ ಬಿಂಬಿಸುವುದು ನಾಚಿಕೆಗೇಡಿನ ಸಂಗತಿ’ ಎಂದರು.