ನವದೆಹಲಿ: ‘ದೇಶದ ಬಡವರ ಹಣವನ್ನು ಲೂಟಿ ಮಾಡಿರುವವರು ಆ ಹಣವನ್ನು ಹಿಂದಿರುಗಿಸಬೇಕಾಗುತ್ತದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಭಾರತೀಯ ಚಾರ್ಟೆಡ್ ಅಕೌಂಟಂಟ್ಗಳ ಸಂಸ್ಥೆ (ಐಸಿಎಐ) ನವದೆಹಲಿಯ ಇಂದಿರಾಗಾಂಧಿ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಲೂಟಿಕೋರರಿರುವ ದೇಶ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಲೂಟಿಕೋರರು ದೇಶವನ್ನು ಬೆಳೆಯವಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
‘ಕಾನೂನು ಉಲ್ಲಂಘಿಸುವ ಕಂಪೆನಿಗಳಿಗೆ ನಾವು ಕಡಿವಾಣ ಹಾಕುತ್ತಿದ್ದೇವೆ. ಇಂಥ ಒಂದು ಲಕ್ಷಕ್ಕೂ ಹೆಚ್ಚು ಕಂಪೆನಿಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ನೋಟು ರದ್ದತಿಯ ಬಳಿಕ ಸುಮಾರು 3 ಲಕ್ಷ ಕಂಪೆನಿಗಳ ಮೇಲೆ ನಿಗಾ ಇಡಲಾಗಿದೆ’ ಎಂದು ಮೋದಿ ಹೇಳಿದ್ದಾರೆ.
ಆರ್ಥಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸಿಎಗಳ ಪಾತ್ರ ಪ್ರಮುಖ
‘ದೇಶದ ಆರ್ಥಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಚಾರ್ಟೆಡ್ ಅಕೌಂಟಂಟ್ಗಳ ಪಾತ್ರ ಪ್ರಮುಖವಾದುದು. ತಮ್ಮ ಸೇವೆ ಪಡೆಯುತ್ತಿರುವವರು ಕಪ್ಪು ಹಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೇ ಎಂಬುದನ್ನು ಚಾರ್ಟೆಡ್ ಅಕೌಂಟಂಟ್ಗಳು ಪರೀಕ್ಷಿಸಬೇಕು’ ಎಂದು ಮೋದಿ ತಿಳಿಸಿದ್ದಾರೆ.
ಜಿಎಸ್ಟಿ ಹೊಸ ಆರಂಭ, ಹೊಸ ಮಾರ್ಗ
‘ದೇಶದ ಆರ್ಥಿಕತೆಗೆ ಜಿಎಸ್ಟಿ ಒಂದು ಹೊಸ ಆರಂಭ, ಹೊಸ ಮಾರ್ಗ’ ಎಂದು ಮೋದಿ ಹೇಳಿದ್ದಾರೆ.