ಇಸ್ಲಾಮಾಬಾದ್: ಭಾರತದಿಂದ ಕಾಶ್ಮೀರವನ್ನು ವಿಮೋಚನೆ ಮಾಡಲು ಹೋರಾಟ ಮುಂದುವರೆಸುವುದಾಗಿ ಅಮೆರಿಕದಿಂದ ‘ಜಾಗತಿಕ ಉಗ್ರ’ ಎಂದು ಕರೆಸಿಕೊಂಡಿರುವ ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಹೇಳಿದ್ದಾನೆ.
ಜಾಗತಿಕ ಉಗ್ರನ ಹಣೆಪಟ್ಟಿ ಕಟ್ಟಿಕೊಂಡ ನಂತರ ಮೊದಲ ಬಾರಿಗೆ ಮಜಾಫ್ಫರಾಬಾದ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆತ, ಅಮೆರಿಕದ ನಿರ್ಧಾರವನ್ನು ತಳ್ಳಿಹಾಕಿದ್ದಾನೆ. ತಾನೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಭಯೋತ್ಪಾದಕ ಅಲ್ಲ ಎಂದಿದ್ದಾನೆ.
‘ನಾವು ಉಗ್ರರಲ್ಲ.. ಭಾರತದಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ಹೋರಾಟ ಮಾಡುತ್ತಿದ್ದೇವೆ. ನಾನು ಮತ್ತು ಇತರ ಕಾಶ್ಮೀರ ಹೋರಾಟಗಾರರು ಯಾವುದೇ ಭಯೋತ್ಪಾದನಾ ಕೃತ್ಯ ಎಸಗಿರುವ ಬಗ್ಗೆ ಅಮೆರಿಕಕ್ಕೆ ಒಂದೇ ಒಂದು ಉದಾಹರಣೆ ಕೊಡಲು ಸಾಧ್ಯವಿಲ್ಲ’ ಎಂದು ಸಲಾವುದ್ದೀನ್ ಹೇಳಿದ್ದಾನೆ.
ಭಾರತದಲ್ಲಿ ದಾಳಿ ನಡೆಸುವ ಸಾಮರ್ಥ್ಯವೂ ತನ್ನ ಸಂಘಟನೆಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಒಂದು ವೇಳೆ, ಶಾಂತಿ ಮಾತುಕತೆ ಫಲಪ್ರದವಾಗುವ ಬಗ್ಗೆ ರಷ್ಯಾ ಅಥವಾ ಚೀನಾ ಖಾತರಿ ನೀಡಿದ್ದೇ ಆದಲ್ಲಿ, ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿಯೂ ಸಲಾವುದ್ದೀನ್ ಹೇಳಿದ್ದಾನೆ.