ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಭದ್ರಗೋಳ ಬಳಿಯ ತಾರಿಕಟ್ಟೆಯಲ್ಲಿ ಅರಣ್ಯದಂಚಿನ ಕಂದಕಕ್ಕೆ ಕಾಲು ಜಾರಿ ಬಿದ್ದಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಮೇಲೆತ್ತಿ ರಕ್ಷಿಸಿ ನಂತರ ಕಾಡಿಗೆ ಬಿಟ್ಟರು.
ಒಂದೂವರೆ ವರ್ಷ ಪ್ರಾಯದ ಕಾಡಾನೆ ಮರಿ ಕಂದಕದಿಂದ ಮೇಲೆ ಬರಲಾಗದೆ ಘೀಳಿಡುತ್ತಿತ್ತು. ಮರಿಯ ರಕ್ಷಣೆ ಮಾಡಲಾಗದೆ ತಾಯಿ ಆನೆ ಕೂಡ ಕಂದಕದ ದಡದಲ್ಲಿ ನಿಂತು ಘೀಳಿಡುತ್ತಾ ಸುತ್ತ ಗಸ್ತು ತಿರುಗುತ್ತಿತ್ತು.
ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿ ಆನೆಯನ್ನು ಬೆದರಿಸಿ ದೂರ ಓಡಿಸಿದರು. ಬಳಿಕ ಕಂದಕದ ದಡದ ಮಣ್ಣು ತೆಗೆಸಿ ಮರಿಯಾನೆ ಸೊಂಟಕ್ಕೆ ಹಗ್ಗ ಹಾಕಿ ಮೇಲೆತ್ತಿದರು. ಬಳಿಕ ಮರಿಯನ್ನು ಕಾಡಿಗೆ ಬಿಡಲಾಯಿತು. ಅನತಿ ದೂರದಲ್ಲಿ ನಿಂತಿದ್ದ ತಾಯಿ ಆನೆಯೂ ಮರಿಯನ್ನು ಕೂಡಿಕೊಂಡಿತು.