ಭೀಮಕವಿ ವೇದಿಕೆ (ಸುನ್ನಾಳ), ರಾಮ ದುರ್ಗ: ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ಪರಭಾಷೆಗಳ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಡಾ. ರಾಜ್ ತ್ಯಾಗ ಮಾಡಿದ್ದಾರೆ. ಅವರ ಕಲ್ಪನೆಯಂತೆ ಅಲ್ಪ ತೃಪ್ತಿಗಾಗಿ ಕನ್ನಡಿಗರು ತಮ್ಮತನವನ್ನು ಬಿಟ್ಟುಕೊಡಬಾರದು. ಅಂದಾಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಸುನ್ನಾಳ ಗ್ರಾಮದಲ್ಲಿ ಶನಿವಾರ ಜರುಗಿದ ತಾಲ್ಲೂಕು ಮಟ್ಟದ ಐದನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿಯಬೇಕು. ಕನ್ನಡ ಭಾಷೆ ಬೆಳೆಸ ಬೇಕು ಎನ್ನುವ ಉದ್ದೇಶದಿಂದ ವರ್ಷ ದಲ್ಲಿ ಮೂರು ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಅನೇಕ ದಿಗ್ಗಜರು ತಾಲ್ಲೂಕಿನಲ್ಲಿ ಹುಟ್ಟಿ ಹೋಗಿದ್ದಾರೆ. ಅಂತ ನೆಲದಲ್ಲಿ ತಾವು ಜನಿಸಿದ್ದು ತಮ್ಮ ಪುಣ್ಯ. ‘ಹಚ್ಚೇವು ಕನ್ನಡದ ದೀಪ….’ ಬರೆದ ಕವಿ ಡಾ. ಡಿ.ಎಸ್. ಕರ್ಕಿ ಅವರ ಹುಟ್ಟೂರಾದ ಹಿರೇಕೊಪ್ಪದಲ್ಲಿ ಸರ್ಕಾರದ ಲಕ್ಷಾಂತರ ಅನುದಾನದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡಿದಂತೆ ಕಷ್ಟದಲ್ಲಿರುವ ನೇಕಾರರ ಸಾಲವನ್ನೂ ಮನ್ನಾ ಮಾಡುವ ಪ್ರಸ್ತಾವವನ್ನು ಮುಖ್ಯಮಂತ್ರಿಗಳ ಮುಂದಿಡಲಾಗಿದೆ. ಸದ್ಯದಲ್ಲಿ ನೇಕಾರರ ಸಾಲವನ್ನೂ ಸಂಪೂರ್ಣ ಮನ್ನಾ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗು ವುದು. ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಮದುರ್ಗ ತಾಲ್ಲೂಕನ್ನು ಪ್ರವಾಸಿ ತಾಣವನ್ನಾಗಿಸಲು ತಾಲ್ಲೂಕಿನಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಮುಳ್ಳೂರು ಗುಡ್ಡದಲ್ಲಿ ಶಿವನ ಮೂರ್ತಿ ಸ್ಥಾಪನೆ ಮತ್ತು ಸಾಯಿ ಮಂದಿರದ ನಿರ್ಮಾಣವು ಪ್ರವಾಸಿ ತಾಣಕ್ಕೆ ಪೂರಕ ಆಗಲಿವೆ. ಮುಂದಿನ ವರ್ಷದ ಮೊದಲನೇ ತಿಂಗಳಲ್ಲಿ ಶಿವನ ಮೂರ್ತಿ ಮತ್ತು ಸಾಯಿ ಮಂದಿರ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಮಕ್ಕಳಿಗೆ ಹೆಚ್ಚು ಓದಿಸು ವುದಕ್ಕಿಂತ ಜೀವನ ನಡೆಸುವ ಕಲೆಯನ್ನು ಕಲಿಸಬೇಕಿದೆ. ಮಕ್ಕಳಲ್ಲಿ ಶಿಕ್ಷಕರನ್ನು ಪ್ರಶ್ನಿಸುವ ಧೈರ್ಯ ತುಂಬಬೇಕು. ಅಂದಾಗ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಜಾನಪದ ಕಲೆಗಳು ಇಂದಿನ ದಿನಗಳಲ್ಲಿ ನಶಿಸಿ ಹೋಗುತ್ತಿವೆ ಎಂಬ ಭಯದ ವಾತಾವರಣದಲ್ಲಿಯೂ ಜನಪದ ಕಲೆಗಳು ತಲೆ ಎತ್ತಿ ನಿಲ್ಲುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಆಶಯ ನುಡಿಗಳ ನ್ನಾಡಿ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎನ್ನುವ ಆದೇಶ ವಾದರೆ ಸಾಲದು. ಕನ್ನಡದಲ್ಲಿ ಓದಿದ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸ ಬೇಕಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ದೇಶಪಾಂಡೆ, ಜಹೂರ ಹಾಜಿ, ರೇಣಪ್ಪ ಸೋಮಗೊಂಡ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಾಮಣ್ಣ ಬ್ಯಾಟಿ ಈಗಿನ ಅಧ್ಯಕ್ಷ ವೆಂಕಟೇಶ ಹುಣಶೀಕಟ್ಟಿ ಅವರಿಗೆ ಕನ್ನಡ ಧ್ವಜ ನೀಡಿದರು.
ಪುರಸಭೆ ಅಧ್ಯಕ್ಷ ಹುಸೇನ್ ಬಾಷಾ ಮೊರಬ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೃಷ್ಣಪ್ಪ ಲಮಾಣಿ, ಶಿವಕ್ಕ ಬೆಳವಡಿ, ಎಪಿಎಂಸಿ ಅಧ್ಯಕ್ಷ ಬಿ.ಎಂ. ಪಾಟೀಲ, ಸದಸ್ಯ ದ್ಯಾವಪ್ಪ ಬೆಳವಡಿ, ವೈ.ಎಚ್. ಪಾಟೀಲ, ಬಿ.ಎಫ್. ಬಸಿಡೋಣಿ, ಅಶೋಕ ಕುಲಗೋಡ, ಶಂಕರ ಪಾಟೀಲ, ಪ್ರಭು ಹೂಗಾರ, ಪ್ರಶಾಂತ ಪಾಟೀಲ, ಮಹಾದೇವ ಕುಲಗೋಡ, ಬಿ. ಈ. ಕುಲಗೋಡ, ದುಂಡಯ್ಯ ಹಿರೇಮಠ, ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ವೇದಿಕೆ ಮೇಲಿದ್ದರು.
ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಸ್ವಾಗತಿಸಿದರು. ಈರಣ್ಣ ಬುಡ್ಡಾಗೋಳ ನಿರೂಪಿಸಿದರು. ಸಿ.ಆರ್. ಗಂಗಣ್ಣವರ ವಂದಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರೊ, ವೆಂಕಟೇಶ ಹುಣಶೀಕಟ್ಟಿ ಮಾತನಾಡಿ, ಕನ್ನಡ ಶಾಲೆಗಳು ಉಳಿಯಬೇಕಾದರೆ ಅವು ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದರು.
ಸರ್ಕಾರ ಮತ್ತು ಸಾರ್ವಜನಿಕರು ಎಚ್ಚೆತ್ತು ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಆಸಕ್ತಿ ವಹಿಸಬೇಕು. ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿ ಬೇರೆ ಭಾಷೆಗಳ ಬಗ್ಗೆಯೂ ಆಸಕ್ತಿ ಇರಲಿ ಎಂದು ಹೇಳಿದರು.
ಇಂದು ಕನ್ನಡ ಅಂಕಿಗಳು ಮಾಯ ವಾಗುತ್ತಿವೆ. ಮುಂದೆ ನಿರ್ಲಕ್ಷ್ಯ ಮಾಡಿದರೆ ಕನ್ನಡ ಅಕ್ಷರಗಳು ಮಾಯವಾಗುವ ಭೀತಿ ಕಾಡುತ್ತಿದೆ. ಅಕ್ಷರವಿಲ್ಲದ ಭಾಷೆ ಆತ್ಮವಿಲ್ಲದ ದೇಹದಂತೆ ಅಕ್ಷರದ ಕವಚವಿದ್ದಾಗ ಭಾಷೆ ಪರಿಪುರ್ಣವಾಗುತ್ತದೆ. ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯ ಯುವ ಜನಾಂಗದ ಮೆಲೆ ಹೆಚ್ಚಿದೆ. ಯುವಕರು ಮನಸ್ಸು ಮಾಡಿದರೆ ಮಾತ್ರ ಕನ್ನಡ ಭಾಷೆ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಹೇಳಿದರು.
ಮನೆಯಲ್ಲಿ ಮಕ್ಕಳಿಗೆ ಅಪ್ಪ, ಅವ್ವ ಎಂದು ಹೇಳದೆ ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನು ಪರಿಚಯ ಮಾಡುತ್ತಿರು ವುದು ವಿಷಾದದ ಸಂಗತಿ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡದ ಸ್ಥಿತಿ ಯಾವ ಮಟ್ಟ ತಲುಪುತ್ತದೆ ಎಂದು ಚಿಂತಿಸಬೇಕಿದೆ ಎಂದರು.
ಅಕ್ಷರ ಎಂದರೆ ಎಂದಿಗೂ ಹಾಳಾಗದ ಮೌಲ್ಯವುಳ್ಳ ವಸ್ತುವಾಗಿದೆ. ಅಕ್ಷರದ ವ್ಯವಸಾಯ ಮಾಡುವವರು ಸಮಾಜಕ್ಕೆ ಒಳ್ಳೆಯ ಮೌಲ್ಯ ಕೊಡಲು ಶ್ರಮಿಸಬೇಕು. ಸಾಹಿತ್ಯ ಸಮ್ಮೇಳನಗಳು ಸಮಾಜದಲ್ಲಿ ಶಾಂತಿ, ಸಮೃದ್ಧಿ ಸ್ಥಾಪಿಸುವ ಜೊತೆಗೆ ವೈಚಾರಿಕ ಕ್ರಾಂತಿಗೆ ಕಾರಣವಾಗಬೇಕು ಎಂದು ಹೇಳಿದರು.
ಅಂಕ, ರ್್ಯಾಂಕ್ಗಳತ್ತ ಗಮನ ಹರಿಸಿ ರುವ ಪಾಲಕರು ಕನ್ನಡ ಮರೆಯುತ್ತಿ ದ್ದಾರೆ. ಮಾತೃಭಾಷೆಯಲ್ಲಿ ಹಿಡಿತ ಸಾಧಿಸಿ ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರೊ. ವೆಂಕಟೇಶ ಹುಣಶೀಕಟ್ಟಿ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.