ಬಳ್ಳಾರಿ: ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಜಿಲ್ಲೆಯ ಇತರೆಡೆಗಳಿಗಿಂತ ಸಿರುಗುಪ್ಪ ತಾಲ್ಲೂಕಿ ನಲ್ಲಿ ಹೆಚ್ಚು ಪರಿಣಾಮ ಬೀರಿದೆ. ಅಲ್ಲಿನ ಎಲ್ಲ ಮದ್ಯದ ಅಂಗಡಿಗಳು ಶನಿವಾರ ದಿಂದ ಬಾಗಿಲು ಮುಚ್ಚಿವೆ. ಜಿಲ್ಲಾ ಕೇಂದ್ರ ವಾದ ನಗರದಲ್ಲಿ 56 ಅಂಗಡಿಗಳು ಶನಿವಾರದಿಂದಲೇ ಬಾಗಿಲು ಮುಚ್ಚಿವೆ. ಉಳಿದ 24 ಅಂಗಡಿಗಳನ್ನೇ ಮದ್ಯ ಪ್ರಿಯರು ನೆಚ್ಚಿಕೊಳ್ಳುವಂತಾಗಿದೆ. ಈ ಮದ್ಯದ ಅಂಗಡಿಗಳಲ್ಲಿ ವಹಿವಾಟು–ನೂಕುನುಗ್ಗಲು ಹೆಚ್ಚಾಗಿದೆ.
ನಗರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 63 ಹರಡಿರುವುದರಿಂದ, ಇಲ್ಲಿನ ಮದ್ಯದ ಅಂಗಡಿಗಳಿಗೆ ವಿನಾ ಯಿತಿ ದೊರಕಿಲ್ಲ. ಜಿಲ್ಲೆಯ ಸಿರುಗುಪ್ಪ ಪಟ್ಟಣದ 14 ಮತ್ತು ಗ್ರಾಮೀಣ ಪ್ರದೇಶದ 4 ಸೇರಿ ಎಲ್ಲ 18 ಮದ್ಯದ ಅಂಗಡಿಗಳನ್ನೂ ಮುಚ್ಚಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ನಾಗರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಇದೇ ವೇಳೆ, ಹೆದ್ದಾರಿಯಲ್ಲಿದ್ದರೂ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬಂದ ಪರಿಣಾಮವಾಗಿ ಮುಚ್ಚುವ ಅನಿ ವಾರ್ಯ ಸಂಕಟದಿಂದ 38 ಅಂಗಡಿಗಳು ಹೊರಬಂದಿವೆ. ಜಿಲ್ಲೆಯಲ್ಲಿರುವ ಸ್ಥಳೀಯ ಸಂಸ್ಥೆಗಳ ಮೂಲಕ ಹಾದು ಹೋಗುವ 11 ರಾಜ್ಯ ಹೆದ್ದಾರಿಗಳ 117.12 ಕಿ.ಮೀ ರಸ್ತೆಯನ್ನು ನಗರ ಸ್ಥಳೀಯ ಪ್ರಾಧಿಕಾರದ ರಸ್ತೆಯೆಂದು ಗುರುತಿಸಿರುವುದರಿಂದ ಈ ಅವಕಾಶ ನಿರ್ಮಾಣವಾಗಿದೆ ಎಂದರು.
ಹೆದ್ದಾರಿಗಳು: ಮಹಾನಗರ ಪಾಲಿಕೆ, ಕೂಡ್ಲಿಗಿ, ಕೊಟ್ಟೂರು, ಸಿರುಗುಪ್ಪ, ಸಂಡೂರು, ಕಂಪ್ಲಿ, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಪುರಸಭೆ, ಕುಡಿತಿನಿ, ಮರಿಯಮ್ಮನಹಳ್ಳಿ, ಕಮಲಾ ಪುರ ಪಟ್ಟಣ ಪಂಚಾಯಿತಿ, ಬಳ್ಳಾರಿ ತಾಲ್ಲೂಕಿನ ಮೋಕಾ, ಸಂಗನಕಲ್ಲು, ಸಂಡೂರು ತಾಲ್ಲೂಕಿನ ತೋರಣಗಲ್ಲು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದುಹೋಗಿದೆ.
ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಕೂಡ್ಲಿಗಿ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳು ಡಿನೋಟಿಫೈ ಆಗಿರುವುದರಿಂದ ಅಲ್ಲಿನ ಮದ್ಯದ ಅಂಗಡಿಗಳು ಉಳಿದು ಕೊಂಡಿವೆ ಎಂದು ನಾಗರಾಜಪ್ಪ ಮಾಹಿತಿ ನೀಡಿದರು.
‘ಈಗ ಮಾತಾಡಕ್ಕೆ ನಮಗೆ ಟೈಮಿಲ್ಲ’
ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನದ ಗ್ರಾಹಕರಿಗೆ ಮದ್ಯ ಪೂರೈಸುತ್ತಿದ್ದ ಅಂಗಡಿಯ ಸಿಬ್ಬಂದಿಯನ್ನು ಮಾತನಾಡಿಸಲು ಯತ್ನಿಸಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು. ನಗರದಲ್ಲಿ ಹಲವು ಮದ್ಯದ ಅಂಗಡಿಗಳು ಬಾಗಿಲು ಮುಚ್ಚಿರುವುದರಿಂದ, ಉಳಿದ ಅಂಗಡಿಗಳಲ್ಲಿ ವಹಿವಾಟು ಹೆಚ್ಚಿದೆ. ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಿಬ್ಬಂದಿ ಪರದಾಡಬೇಕಾದ ಸನ್ನಿವೇಶವೂ ನಿರ್ಮಾಣವಾಗಿದೆ. ಹೀಗಾಗಿ, ಅಂಗಡಿಗಳಲ್ಲಿ ಸಿಬ್ಬಂದಿಗೆ ಗ್ರಾಹಕರ ಲ್ಲದವರೊಡನೆ ಮಾತನಾಡಲು ಸಮಯ ಇಲ್ಲದಂತಾಗಿದೆ.
ಅಂಕಿ ಅಂಶ
268 ಜಿಲ್ಲೆಯಲ್ಲಿರುವ ಒಟ್ಟು ಮದ್ಯದ ಅಂಗಡಿಗಳು
130 ಶನಿವಾರದಿಂದಲೇ ಮದ್ಯದ ಅಂಗಡಿಗಳಿಗೆ ಬೀಗ
138 ಸ್ಥಳೀಯ ಆಡಳಿತ ಸಂಸ್ಥೆಯ ವ್ಯಾಪ್ತಿಗೆ ಸೇರಿದ ಅಂಗಡಿಗಳು
* *
ಹೆದ್ದಾರಿ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳ ಮಾಲೀಕರಲ್ಲಿ ಹಲವರು ಸ್ಥಳಾಂತರ ಕಾರ್ಯವವನ್ನು ಚುರುಕುಗೊಳಿಸಿದ್ದಾರೆ
ನಾಗರಾಜಪ್ಪ
ಅಬಕಾರಿ ಇಲಾಖೆ ಉಪ ಆಯುಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.