ಮಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೂಲಕ ಪರೋಕ್ಷ ತೆರಿಗೆಗಳ ಸುಧಾರಣೆ ಮಾತ್ರ ಆರಂಭವಾಗಿದೆ. ಒಂದು ದೇಶ ಒಂದು ತೆರಿಗೆ ಎಂಬುದು ಸುಳ್ಳು ಘೋಷಣೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಭಾನುವಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, 'ಜಿಎಸ್ಟಿ ಜಾರಿಗೆ ತರುವ ಪ್ರಸ್ತಾವವನ್ನು ಹಿಂದಿನ ಯುಪಿಎ ಸರ್ಕಾರ ರೂಪಿಸಿತ್ತು. ಆಗ ವಿರೋಧಿಸಿದ್ದ ಬಿಜೆಪಿ ಈಗ ಅದನ್ನೇ ಜಾರಿ ಮಾಡಿ ಬೆನ್ನು ತಟ್ಟಿಕೊಳ್ಳುತ್ತಿದೆ' ಎಂದು ಟೀಕಿಸಿದರು.
ಜಿಎಸ್ಟಿ ಒಂದು ತೆರಿಗೆ ನೀತಿ. ಅದರಲ್ಲಿ ಪರೋಕ್ಷ ತೆರಿಗೆಗಳನ್ನು ಒಂದೆಡೆ ತರಲಾಗಿದೆ. ಅದರ ಹೊರತಾಗಿಯೂ ಆದಾಯ ತೆರಿಗೆ, ಕಸ್ಟಮ್ಸ್ ಸುಂಕ, ಆಮದು ಮತ್ತು ರಫ್ತು ತೆರಿಗೆ, ಸೆಸ್ಗಳು ಜಾರಿಯಲ್ಲಿವೆ. ಕೇಂದ್ರ ಸರ್ಕಾರದ ಘೋಷಣೆಯಲ್ಲಿ ಸತ್ಯಾಂಶವಿಲ್ಲ ಎಂದರು.
ಜಿಎಸ್ಟಿ ಜಾರಿಗೆ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮಧ್ಯರಾತ್ರಿ ಸಮಾರಂಭ ನಡೆಸಿರುವುದು ರಾಜಕೀಯ ಗಿಮಿಕ್ ಎಂದು ಅವರು ಟೀಕಿಸಿದರು.