ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ಕೇಂದ್ರ ಚೌಡೇಶ್ವರಿ ದೇವಿ ದೇಗುಲ

Last Updated 2 ಜುಲೈ 2017, 9:58 IST
ಅಕ್ಷರ ಗಾತ್ರ

ಆನೇಕಲ್‌: ಇಲ್ಲಿನ ಹೃದಯಭಾಗದ ಚೌಡೇಶ್ವರಿ ದೇವಿ ದೇವಾಲಯ ಪ್ರಮುಖ ಆಕರ್ಷಣೆಯಾಗಿದೆ. ಈ ಶಕ್ತಿ ದೇವತೆಯು ಸುತ್ತಲಿನ ಗ್ರಾಮಗಳು ಸೇರಿದಂತೆ ಪಟ್ಟಣದ ಸಾವಿರಾರು ಜನರ ಆರಾಧ್ಯ ದೈವವಾಗಿದೆ.ಈ ದೇವಾಲಯವು ಪ್ರಸ್ತುತ ತೊಗಟವೀರ ಜನಾಂಗದವರ ಆಡಳಿತದಲ್ಲಿ ನಡೆಯುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ದೇವಿಯ ವಿಜಯದಶಮಿ ಉತ್ಸವ ಇಡೀ ಜಿಲ್ಲೆಯಲ್ಲಿಯೇ ಖ್ಯಾತಿ ಹೊಂದಿದೆ.

ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ದೇವಾಲಯವು  ಭಕ್ತಿ ಭಾವದ ಕೇಂದ್ರವಾಗಿದ್ದು ಸಾವಿರಾರು ಮಂದಿ ಭಕ್ತರಾಗಿದ್ದಾರೆ.ತಮ್ಮ ಕಷ್ಟ ಸುಖಗಳಿಗೆ ದೇವರ ಮೊರೆ ಹೋಗುವ ಪರಿಪಾಠ ಹೊಂದಿದ್ದಾರೆ. ದೇವಾಲಯದ ವಿಗ್ರಹ  ಆಕರ್ಷಣೀಯವಾಗಿದ್ದು ಎಲ್ಲಾ ಸಮುದಾಯದ ಜನರನ್ನು ಸೆಳೆಯುವ ಶಕ್ತಿ ದೇವಿ ಮೂರ್ತಿಗಿದೆ ಎಂಬ ನಂಬಿಕೆ ಭಕ್ತರದು.  

ನಂದವರಂನಿಂದ ಪ್ರಾರಂಭವಾದ ದೇವಾಲಯದ ಇತಿಹಾಸದ ಅಂಗವಾಗಿ ಆಂಧ್ರಪ್ರದೇಶದ ನಂದವರಂನಿಂದ ಚೌಡೇಶ್ವರಿ ಅಮ್ಮನವರ ಜ್ಯೋತಿಯನ್ನು ವಿಜಯದಶಮಿ ಉತ್ಸವಕ್ಕೆ ತರಲಾಗುತ್ತದೆ. ಬ್ರಾಹ್ಮಣರಿಗೆ ನಂಟು:ಚೌಡೇಶ್ವರಿ ದೇವಿ ತೊಟವೀರರ ಆರಾಧ್ಯ ದೈವವಾಗಿದ್ದರೂ ನಂದವರೀಕ ಬ್ರಾಹ್ಮಣರ ಕುಲದೇವತೆಯಾಗಿರುವುದು ವಿಶೇಷ. ಇದಕ್ಕೆ ಸಂಬಂಧಪಟ್ಟಂತೆ ಒಂದು ವೃತ್ತಾಂತವು ಪ್ರಚಲಿತದಲ್ಲಿದೆ. 

400 ವರ್ಷಗಳಿಗೂ ಹಿಂದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಂದವರಂ ಎಂಬ ಗ್ರಾಮವಿತ್ತು. ಅದು ಆ ಪ್ರದೇಶದ ನಂದನ ಚಕ್ರವರ್ತಿಯ ರಾಜಧಾನಿಯಾಗಿತ್ತು.
ಈ ಚಕ್ರವರ್ತಿಯು ವಿಶ್ವೇಶ್ವರನ ದರ್ಶನಕ್ಕೆಂದು ಕಾಶಿಗೆ ಆಗಾಗ ಹೋಗುತ್ತಿದ್ದ ಎನ್ನಲಾಗಿದೆ. ಕಾಶಿಯಲ್ಲಿ  ಚೌಡೇಶ್ವರಿಯ ಆರಾಧಕರು ಮಹಾಮಹಿಮರಾಗಿದ್ದ ಬ್ರಾಹ್ಮಣ ತಪಸ್ವಿಗಳನ್ನು ಚಕ್ರವರ್ತಿ ಸಂದರ್ಶಿಸುತ್ತಿದ್ದರು.

ಈ ಬ್ರಾಹ್ಮಣರನ್ನು ರಾಜ ತನ್ನ ರಾಜ್ಯಕ್ಕೆ ಆಹ್ವಾನಿಸುತ್ತಲೇ ಇದ್ದ. ಆದರೆ ಅವರು ಬಂದಿರಲಿಲ್ಲ. ಸಂತಾನ ಭಾಗ್ಯವಿಲ್ಲದ ಈ ಚಕ್ರವರ್ತಿಗೆ ಬ್ರಾಹ್ಮಣ ತಪಸ್ವಿಗಳು ‘ಪುತ್ರವಾನ್‌ ಭವ’ ಎಂದು ಆಶೀರ್ವದಿಸಿದರು. ತನಗೆ ಸಂತಾನವಾದರೆ ಅರ್ಧ ರಾಜ್ಯ ನೀಡುವುದಾಗಿ ಚಕ್ರವರ್ತಿ ಚೌಡೇಶ್ವರಿಯ ಆರಾಧಕರಿಗೆ ವಾಗ್ದಾನ ಮಾಡಿದರು ಎನ್ನಲಾಗಿದೆ.
ತಪಸ್ವಿಗಳ ವರದಿಂದ ನಂದನ ಚಕ್ರವರ್ತಿಗೆ ಪುತ್ರಭಾಗ್ಯ ಲಭಿಸಿತು. ಅದನ್ನು ತಿಳಿದು ವಿಪ್ರರು ನಂದನ ರಾಜ್ಯಕ್ಕೆ ಬಂದು ಅರ್ಧ ರಾಜ್ಯ ಕೇಳಿದರು. ಆದರೆ ಚಕ್ರವರ್ತಿಯು ತನ್ನ ವಾಗ್ದಾನ ಮರೆತಿದ್ದ.

ಆಗ 6,000 ಮಂದಿ ವಿಪ್ರರು ನಿರಾಸೆಗೊಂಡು ತಾವು ಹೊರಟಿದ್ದ ರಾಜ್ಯಗಳಿಗೆ ಹಿಂದಿರುಗದೇ ಅಲ್ಲಲ್ಲಿ ಚದುರಿ ಹೋದರು. ಕ್ರಮೇಣ ಚಕ್ರವರ್ತಿಗೆ ಜ್ಞಾನೋದಯವಾಗಿ ಚಕ್ರವರ್ತಿಯು ರಾಜ್ಯ ನೀಡಲು ಮುಂದಾದನು. ಆಗ ಶ್ರೀವತ್ಸವೇ ಮೊದಲಾದ 13 ಗೋತ್ರಗಳಿಗೆ ಸೇರಿದ ಬ್ರಾಹ್ಮಣರಿಗೆಲ್ಲಾ ನಂದವರಂ ಪ್ರದೇಶವನ್ನು ಬಿಟ್ಟುಕೊಟ್ಟನು.

ಕ್ರಮೇಣ ಬ್ರಾಹ್ಮಣರು ರಾಜ್ಯದ ಜವಾಬ್ದಾರಿಯನ್ನು ತೊಗಟವೀರರಿಗೆ ವಹಿಸಿಕೊಟ್ಟರು. ದೇವಾಲಯದಲ್ಲಿನ ಚೌಡೇಶ್ವರಿ ದೇವಿಯ ಅರ್ಚನೆಯ ಜವಾಬ್ದಾರಿಯನ್ನೂ ಅವರಿಗೆ ನೀಡಿದರು. ಹಾಗಾಗಿ ಬ್ರಾಹ್ಮಣರಿಗೂ ಚೌಡೇಶ್ವರಿ ದೇವಾಲಯಕ್ಕೂ ವಿಶೇಷ ನಂಟಿದ್ದು ಇದು ಇಂದಿಗೂ ನಡೆಯುತ್ತಿದೆ.

ವಿಶೇಷ ಪೂಜೆಗಳು: ಪಟ್ಟಣದ  ಚೌಡೇಶ್ವರಿ ದೇವಿ ದೇವಾಲಯದಲ್ಲಿ ಪ್ರತಿದಿನ ಅಭಿಷೇಕ, ತ್ರಿಕಾಲ ಪೂಜೆ ನಡೆಯುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ದೇವಾಲಯದ ವತಿಯಿಂದ ಚಂಡಿಕಾ ಹೋಮ ಮತ್ತು ಸತ್ಯನಾರಾಯಣಸ್ವಾಮಿ ಪೂಜೆ ಇಲ್ಲಿ ನಡೆಯುವುದು ವಿಶೇಷ.

ಶುಕ್ರವಾರ ಮತ್ತು ಮಂಗಳವಾರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ ಹಾಗೂ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಕಾರ್ತಿಕ ಮಾಸ, ಆಷಾಡ ಮಾಸ, ದೀಪೋತ್ಸವ, ಶಿವರಾತ್ರಿ ದಿನಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ.     

ವೈಭವದ ಉತ್ಸವ
ದೇವಾಲಯ ಸಮಿತಿ ಹಾಗೂ ತೊಗಟವೀರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಚೌಡೇಶ್ವರಿ ದೇವಿ ವಿಜಯದಶಮಿ ಉತ್ಸವವು ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತದೆ. ನವರಾತ್ರಿಯ 9 ದಿನಗಳು ಸಹ ದೇವಾಲಯದಲ್ಲಿ ಜಾತ್ರೆಯ ವಾತಾವರಣವಿರುತ್ತದೆ.

9 ದಿನಗಳು ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ನವರಾತ್ರಿ ಪ್ರಯುಕ್ತ ದೇವಿಗೆ ವಿಜಯಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಚೌಡೇಶ್ವರಿ ದೇವಿ, ಮಹಿಷಾಸುರ ಮರ್ದಿನಿ, ಅನ್ನಪೂರ್ಣೇಶ್ವರಿ, ಗಜಲಕ್ಷ್ಮೀ, ಧನಲಕ್ಷ್ಮೀ, ಸರಸ್ವತಿ, ದುರ್ಗಾದೇವಿ, ಗಾಯತ್ರಿ ದೇವಿ ಅಲಂಕಾರ ಮಾಡಲಾಗುತ್ತದೆ.

ಆನೆ ಅಂಬಾರಿ
ಚೌಡೇಶ್ವರಿ ದೇವಿ ವಿಜಯದಶಮಿ ಆನೆ ಅಂಬಾರಿ ಉತ್ಸವ ತಾಲ್ಲೂಕಿನಲ್ಲಿಯೇ ಹೆಚ್ಚು ಪ್ರಖ್ಯಾತಿಯಾಗಿದೆ. ಹಲವಾರು ಜಾನಪದ ಕಲಾ ತಂಡಗಳೊಂದಿಗೆ ನಡೆಯುವ ಆನೆ ಅಂಬಾರಿ ಉತ್ಸವ ಕಣ್ಮನ ಸೆಳೆಯುತ್ತದೆ. ಆನೆ ಅಂಬಾರಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT