ತಿರುವನಂತಪುರ: ಕೇರಳದಲ್ಲಿ ಜಾರಿಗೆ ಬಂದಿರುವ ಹೊಸ ಮದ್ಯ ನೀತಿಯ ಅಡಿಯಲ್ಲಿ ತ್ರಿತಾರಾ ಮತ್ತು ಅದಕ್ಕಿಂತ ಮೇಲಿನ ಹಂತಗಳ ಹೋಟೆಲ್ಗಳಲ್ಲಿ 77 ಬಾರ್ಗಳು ಭಾನುವಾರದಿಂದ ಮತ್ತೆ ತೆರೆದಿವೆ.
2112 ಸಾರಾಯಿ ಅಂಗಡಿಗಳ ಪರವಾನಗಿಯನ್ನು ನವೀಕರಿಸಲಾಗಿದೆ. ತ್ರಿತಾರಾ ಮತ್ತು ಅದಕ್ಕಿಂತ ಮೇಲಿನ ವರ್ಗದ ಹೋಟೆಲ್ಗಳಲ್ಲಿ ಮುಚ್ಚಲಾಗಿದ್ದ ಬಾರ್ಗಳನ್ನು ಜುಲೈ 1ರಿಂದ ತೆರೆಯುವುದಕ್ಕಾಗಿ ಹಾಗೂ ಈ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಹೆಂಡವನ್ನು ಪೂರೈಸಲು ಅವಕಾಶ ನೀಡುವುದಕ್ಕಾಗಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರ ಕಳೆದ ತಿಂಗಳು ಹೊಸ ಮದ್ಯನೀತಿಯನ್ನು ಜಾರಿಗೆ ತಂದಿತ್ತು.
ಮುಗಿಬಿದ್ದ ಜನ: ಭಾನುವಾರ ಬೆಳಿಗ್ಗೆ ಬಾರ್ಗಳು ಬಾಗಿಲು ತೆರೆಯುತ್ತಿದ್ದಂತೆಯೇ, ಜನರು ಮದ್ಯಕ್ಕಾಗಿ ಮುಗಿಬಿದ್ದರು. ಎಲ್ಲ ಮಳಿಗೆಗಳ ಮುಂದೆ ಜನಜಂಗುಳಿ ಕಂಡು ಬಂತು.
‘ಬಾರ್ಗಳು ಮತ್ತೆ ಕಾರ್ಯಾರಂಭ ಮಾಡಿರುವುದರಿಂದ ಸಂತಸವಾಗಿದೆ. ಇಡೀ ದಿನ ಕೆಲಸ ಮಾಡಿದ ನಂತರ ಇನ್ನು ಮುಂದೆ ಪೊಲೀಸರ ಭಯವಿಲ್ಲದೇ ಮದ್ಯ ಸೇವಿಸಿ ದಣಿವನ್ನು ನಿವಾರಿಸಬಹುದು’ ಎಂದು ತಿರುವನಂತಪುರದಲ್ಲಿ ಬಾರ್ ಒಂದಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ಹೇಳಿದರು.
ಕೊಲ್ಲಂನಲ್ಲಿ ಮದ್ಯಪ್ರಿಯರು ಪಟಾಕಿಗಳನ್ನು ಸಿಡಿಸಿ ಬಾರ್ ತೆರೆದಿರುವುದನ್ನು ಸ್ವಾಗತಿಸಿದರು. ಕೊಲ್ಲಂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿಂದು ಕೃಷ್ಣ ಅವರು ಕಾರ್ಯಕರ್ತರೊಂದಿಗೆ ಬಾರ್ ಒಂದರ ಮುಂದೆ ಮೆರವಣಿಗೆ ನಡೆಸಿ, ಮಸಾಲೆ ಮಜ್ಜಿಗೆಯನ್ನೂ ಹಂಚಿದರು.