ಹರಪನಹಳ್ಳಿ: ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ ನಾಲ್ವರು ರೈತರ ಮೇಲೆ ಭಾನುವಾರ ದಾಳಿ ಮಾಡಿದ ಚಿರತೆಯನ್ನು ರೊಚ್ಚಿಗೆದ್ದ ಗ್ರಾಮಸ್ಥರು ಹೊಡೆದು ಕೊಂದುಹಾಕಿದ್ದಾರೆ.
ಗ್ರಾಮದ ಚಿಗಟೇರಿ ಬಸಪ್ಪ ಅವರ ಎಲೆಬಳ್ಳಿ ತೋಟಕ್ಕೆ ಹೋಗಿದ್ದ ರೈತ ನಾಗೇಶಪ್ಪ (60) ಮೇಲೆ ಚಿರತೆ ದಾಳಿ ಮಾಡಿದೆ. ಭಯಗೊಂಡ ಅವರು ಚೀರಿಕೊಂಡಾಗ ಪಕ್ಕದ ತೋಟದಲ್ಲಿದ್ದ ರೈತರು ಬಂದು ಚಿರತೆ ಓಡಿಸಲು ಯತ್ನಿಸಿದರು. ಆ ವೇಳೆ ಸಿದ್ದೇಶ್ (30), ಶಕ್ಷಾವಲಿ (34), ಮಲ್ಲೇಶ್ (34) ಅವರ ಮೇಲೂ ಚಿರತೆ ದಾಳಿ ಮಾಡಿತು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ಚಿರತೆಯನ್ನು ಸೆರೆಹಿಡಿದರು. ಅದಾಗಲೇ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ದೊಣ್ಣೆಗಳಿಂದ ಚಿರತೆಯನ್ನು ಮನಸೋಇಚ್ಛೆ ಹೊಡೆದರು.
ಗ್ರಾಮಸ್ಥರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆಯಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಬಲೆಯಲ್ಲಿಯೇ ಚಿರತೆ ಸಾವ ನ್ನಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.
ತಲೆಗೆ ತೀವ್ರ ಗಾಯವಾಗಿರುವ ನಾಗೇಶಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಉಳಿದ ಮೂವರು ಹರಪನಹಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಕಣಿವೆಹಳ್ಳಿ ಅರಣ್ಯದಲ್ಲಿ ಕಳೇಬರಸುಡಲಾಗುವುದು’ ಎಂದು ಅರಣ್ಯ ಇಲಾಖೆಯ ಬಷೀರ್ ತಿಳಿಸಿದರು.
***
ಕಾರ್ಮಿಕನ ತಿಂದು ಹಾಕಿದ ಚಿರತೆಗಳು
ಟೇಕಲ್ (ಕೋಲಾರ): ಇಲ್ಲಿನ ಕೆಂಪಸಂದ್ರ ಹಾಗೂ ವೀರಕಪುತ್ರ ಗ್ರಾಮದ ನಡುವಿನ ಬೆಟ್ಟದ ತಪ್ಪಲಿನಲ್ಲಿ ಶನಿವಾರ ರಾತ್ರಿ ಕೂಲಿ ಕಾರ್ಮಿಕರೊಬ್ಬರನ್ನು ಚಿರತೆಗಳು ಕೊಂದು ತಿಂದಿವೆ.
ಬಂಡೂರು ಅಗ್ರಹಾರದ ನಿವಾಸಿ ವೆಂಕಟೇಶಪ್ಪ (45) ಬಲಿಯಾದವರು. ಇವರಿಗೆ ಏಳು ಮಕ್ಕಳಿದ್ದಾರೆ. ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹಿಂತಿರುಗುವಾಗ ಅವರ ಮೇಲೆ ಎಗರಿದ ಚಿರತೆಗಳು, ಅವರ ಮುಖ, ಕುತ್ತಿಗೆ, ಎದೆ, ಹೊಟ್ಟೆ ಭಾಗವನ್ನು ತಿಂದು ಹಾಕಿವೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.