ಢಾಕಾ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ವಿರುದ್ಧ ದೋಷಾರೋಪ ಹೊರಿಸುವ ಬಾಂಗ್ಲಾ ದೇಶದ ಸಂಸತ್ತಿನ ಅಧಿಕಾರವನ್ನು ಅನೂರ್ಜಿತಗೊಳಿಸಿ ಇಲ್ಲಿನ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. 2014ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಸಂಸತ್ತಿಗೆ ಈ ಅಧಿಕಾರ ನೀಡಲಾಗಿತ್ತು.
ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಅವಾಮಿ ಲೀಗ್, ‘ಇದು ಸಂಸತ್ತಿನ ಸಾರ್ವಭೌಮತ್ವವನ್ನು ಕಡೆಗಣಿಸುವ ಸಾಧ್ಯತೆಯಿದೆ’ ಎಂದು ಹೇಳಿದೆ.
ನ್ಯಾಯಮೂರ್ತಿಗಳ ಮೇಲಿನ ಆರೋಪದ ವಿಚಾರಣೆಗೆ ನ್ಯಾಯಾಂಗ ಸಮಿತಿಗೆ ಅವಕಾಶ ನೀಡಿ ಮತ್ತು ಪ್ರಧಾನಿಗೆ ನ್ಯಾಯಮೂರ್ತಿಗಳನ್ನು ವಜಾ ಮಾಡುವ ಅಧಿಕಾರ ನೀಡಿ ತಿದ್ದುಪಡಿ ತರಲಾಗಿತ್ತು. ಇದು ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
‘ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಒಮ್ಮತದಿಂದ ತಿರಸ್ಕರಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಸಿನ್ಹಾ ಹೇಳಿದ್ದಾರೆ.