ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ವಿಶ್ವನಾಥ್ ಅವರ ಪುತ್ರಿ ವಿ.ಶ್ರುತಿ ಅವರು ಅಮೆರಿಕದ ಹವಾಯ್ನಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾಗ ಆಮ್ಲಜನಕ ನಳಿಕೆ ಕಳಚಿಬಿದ್ದ ಪರಿಣಾಮ ಅಸ್ವಸ್ಥರಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ. ಕುಟಂಬದವರು ಅವರನ್ನು ನೋಡಲು ತೆರಳುವುದಕ್ಕೆ ಪಾಸ್ಪೋರ್ಟ್ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ.
ಶ್ರುತಿ ತಂದೆ ಕಂದಾಯ ಇಲಾಖೆಯ ನಿವೃತ್ತ ನೌಕರ ವಿಶ್ವನಾಥ್, ತಾಯಿ ಶಕುಂತಲಾ ಮತ್ತು ಸಹೋದರ ಕಾರ್ತಿಕ್ ಅವರು ಪಾಸ್ಪೋರ್ಟ್ಗಾಗಿ ಆನ್ಲೈನ್ ಮೂಲಕ ತತ್ಕಾಲ್ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಪಾಸ್ಪೋರ್ಟ್ ಕಚೇರಿಗೆ ಬರುವಂತೆ ಅವರಿಗೆ ಸೂಚನೆ ಬಂದಿದೆ.
‘ಪ್ರಜಾವಾಣಿ’ಯೊಂದಿಗೆ ಕಾರ್ತಿಕ್ ಮಾತನಾಡಿ, ‘ಪಾಸ್ಪೋರ್ಟ್ ಅನ್ನು ತ್ವರಿತವಾಗಿ ಕೊಡಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಅವರಿಗೂ ಮೊರೆ ಇಟ್ಟಿದ್ದೇವೆ. ಪ್ರಧಾನಿ, ವಿದೇಶಾಂಗ ಸಚಿವೆ ಸುಷ್ಮಾ ಅವರಿಗೂ ಟ್ವಿಟರ್ ಸಂದೇಶ ಕಳುಹಿಸಿದ್ದೇನೆ’ ಎಂದರು.
‘ಹತ್ತು ತಿಂಗಳ ಹಿಂದೆ ವಿಜಯವಾಡದ ಸೀತಾರಾಮಕೃಷ್ಣ ಅವರೊಂದಿಗೆ ಶ್ರುತಿ ವಿವಾಹವಾಗಿತ್ತು. ಸೀತಾರಾಮಕೃಷ್ಣ ಅವರು ಕ್ಯಾಲಿಪೋರ್ನಿಯಾದಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ರಜೆ ಕಳೆಯಲು ಅವರಿಬ್ಬರು ಹವಾಯ್ ದ್ವೀಪಕ್ಕೆ ಹೋಗಿದ್ದಾಗ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾಗ ಮುಳುಗಿ ಶ್ರುತಿ ಅಸ್ವಸ್ಥರಾಗಿ ಕೋಮಾಸ್ಥಿತಿ ತಲುಪಿದ್ದಾರೆ’ ಎಂದರು.