ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಬಳಿಯ ಮಲ್ಲಾರಂ ಗ್ರಾಮದ ವಿದ್ಯುತ್ ಕಂಬವೊಂದರ ತುದಿಯಲ್ಲಿ ಗಂಡು ಚಿರತೆಯ ಮೃತದೇಹ ಪತ್ತೆಯಾಗಿದೆ.
‘ರಾತ್ರಿ ವೇಳೆ ಕಂಬ ಹತ್ತಿದ ಚಿರತೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರಬಹುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
‘ಗ್ರಾಮಕ್ಕೆ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡು ಬೆಕ್ಕುಗಳು ಕಂಡು ಬರುತ್ತಿದ್ದವು. ಇಲ್ಲಿ ಯಾವುದೇ ಕಳ್ಳಬೇಟೆಗಾರರ ಹಾವಳಿ ಇರಲಿಲ್ಲ’ ಎಂದೂ ಅವರು ವಿವರಿಸಿದ್ದಾರೆ.
‘ಚಿರತೆಗಳು ಬೇಟೆಯಾಡಿದ ಪ್ರಾಣಿಯನ್ನು ಮರದ ಮೇಲೆ ಹೊತ್ತೊಯ್ಯುವುದು ಸಾಮಾನ್ಯ. ಆದರೆ ಈ ಚಿರತೆ ವಿದ್ಯುತ್ ಕಂಬದ ಮೇಲೆ ಹತ್ತಿರುವುದು ಆಶ್ವರ್ಯಕರ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಗ್ರಾಮಸ್ಥರು ಚಿರತೆಯನ್ನು ಕೊಂದು ಕಂಬದಲ್ಲಿ ನೇತು ಹಾಕಿರುವ ಸಾಧ್ಯತೆ ಇಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ಇಲಾಖೆಯ ನೌಕರರ ಸಹಾಯದಿಂದ ಚಿರತೆಯ ಮೃತದೇಹವನ್ನು ಕಂಬದಿಂದ ಕೆಳಗಿಳಿಸಿದ ಅರಣ್ಯ ಅಧಿಕಾರಿಗಳು ಶವ ಪರೀಕ್ಷೆಗೆ ಕಳುಹಿಸಿದ್ದಾರೆ.