ಬೆಂಗಳೂರು: ಕರ್ತವ್ಯದಲ್ಲಿದ್ದಾಗ ಲೈನ್ಮನ್ಗಳು ಮೃತಪಟ್ಟರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ ₹ 5ಲಕ್ಷ ಪರಿಹಾರ ಕೊಡುವುದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.
ವಿದ್ಯುತ್ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಈಗ ₹ 2 ಲಕ್ಷ ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇತ್ತು ಎಂದು ಶಿವಕುಮಾರ್ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಪ್ರೊಬೇಷನರಿ ಲೈನ್ಮನ್ಗಳು ವಿದ್ಯುತ್ ಕಂಬ ಹತ್ತಬಾರದು ಎಂಬ ನಿಯಮವಿತ್ತು. ಅದನ್ನು ವಾಪಸ್ ಪಡೆದು ಅವರೂ ಕಂಬ ಹತ್ತಲು ಆದೇಶಿಸಲಾಗಿದೆ. ಒಂದು ವೇಳೆ ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ಕಾಯಂ ನೌಕರರಿಗೆ ಸಿಗುವ ಸವಲತ್ತುಗಳೇ ಅವರಿಗೂ ಸಿಗಲಿವೆ ಎಂದರು.
***
ಮಾದರಿ ವಿದ್ಯುತ್ ಗ್ರಾಮ
ಶಾಸಕರು ಮತ್ತು ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಐದು ‘ಮಾದರಿ ವಿದ್ಯುತ್ ಗ್ರಾಮ’ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ಗ್ರಾಮಕ್ಕೆ ₹ 25 ಲಕ್ಷದಿಂದ ₹ 40 ಲಕ್ಷದವರೆಗೆ ಖರ್ಚು ಮಾಡಲು ಉದ್ದೇಶಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಈ ಯೋಜನೆಯಡಿ ಬೀದಿ ದೀಪಗಳಿಗೆ ಎಲ್ಇಡಿ/ ಸೋಲಾರ್ ಬಲ್ಬ್ ಅಳವಡಿಕೆ ಹಾಗೂ ರಾತ್ರಿ ವೇಳೆ ಮಾತ್ರ ಬೆಳಗುವಂತೆ ಸ್ವಯಂ ಚಾಲಿತ ಸ್ವಿಚ್ ವ್ಯವಸ್ಥೆ, ಟ್ರಾನ್ಸ್ಫರ್ಮರ್ಗಳ ಬದಲಾವಣೆ, ಹೊಸ ಮೀಟರ್ ಅಳವಡಿಕೆ, ಮೂರು ಫೇಸ್ ವಿತರಣಾ ಮಾರ್ಗ ಹಾಗೂ 24 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.