ಬೆಂಗಳೂರು: ನವೀನ ಆಲೋಚನೆ ಹೊಂದಿರುವ ನವೋದ್ಯಮಿಗಳಿಗೆ ಉತ್ತೇಜನ ನೀಡಲು ‘ಎಲಿವೇಟ್–100’ ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಯೋಜನೆಯ ಅಧಿಕೃತ ವೆಬ್್ಸೈಟ್(www.elevate.bengaluruite.biz) ಮತ್ತು ಲಾಂಛನ ಬಿಡುಗಡೆ ಮಾಡಿದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನವೋದ್ಯಮ ಆರಂಭಿಸಲು ಆಸಕ್ತಿ ಇರುವವರು ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಲು ಇದೇ 18ರವರೆಗೆ ಅವಕಾಶ ಕಲ್ಪಿಸಲಾಗಿದೆ. ನೋಂದಾಯಿಸಿಕೊಂಡವರ ಪೈಕಿ ಪ್ರತಿಭಾನ್ವಿತ 100 ಮಂದಿಗೆ ಈ ಯೋಜನೆಯಡಿ ಎಲ್ಲ ನೆರವು ನೀಡಲಾಗುವುದು. ಇದಕ್ಕಾಗಿ ₹ 400 ಕೋಟಿ ಮೀಸಲಿಡಲಾಗಿದೆ ಎಂದರು.
ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಒದಗಿಸಿದರೆ ಉಳಿದ ನೆರವನ್ನು ಖಾಸಗಿ ಸಂಸ್ಥೆಗಳು ನೀಡಲಿವೆ. ಆಗಸ್ಟ್ 30ರೊಳಗೆ ನವೋದ್ಯಮಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2020ರ ವೇಳೆಗೆ ರಾಜ್ಯದಲ್ಲಿ 20 ಸಾವಿರ ನವೋದ್ಯಮ ಸ್ಥಾಪಿಸುವ ಉದ್ದೇಶ ಇದೆ ಎಂದು ಹೇಳಿದರು.
ನವೋದ್ಯಮಕ್ಕೆ ಪ್ರೋತ್ಸಾಹ ನೀಡಲು ₹ 10 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ಈವರೆಗೆ ಖರ್ಚಾಗಿರುವುದು ₹ 5 ಕೋಟಿ ಮಾತ್ರ. ಅದು ಕೂಡ ಸಿಬ್ಬಂದಿ ಸಂಬಳಕ್ಕೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.