ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದತ್ತ ಸಂಚಾರಿ ತಾರಾಲಯ

‘ಶ್ರೇಷ್ಠ ಲೇಖಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌. ಸೀತಾರಾಂ ಮಾಹಿತಿ
Last Updated 5 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮೀಣ ಮಕ್ಕಳಿಗೆ ಖಗೋಳವಿಜ್ಞಾನದ ಬಗ್ಗೆ ತಿಳಿಸಲು ಸಿದ್ಧವಾಗಿರುವ 5 ಸಂಚಾರಿ ತಾರಾಲಯಗಳು ಈ ತಿಂಗಳ ಅಂತ್ಯದಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿವೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌. ಸೀತಾರಾಂ ತಿಳಿಸಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಗರದ ಸುರಾನ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಶ್ರೇಷ್ಠ ಲೇಖಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಲ್ಲಿಯವರೆಗೆ ಕೇವಲ ಒಂದು ಸಂಚಾರಿ ತಾರಾಲಯ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದೆ. ಅದರ ಜತೆಗೆ ಈಗ ಇನ್ನೂ 5 ವಾಹನಗಳು ಸಿದ್ಧವಾಗಿವೆ. ಒಂದೊಂದು ವಾಹನವು 6 ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಲಿದೆ. ಒಂದು ವರ್ಷದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಪೂರೈಸುವ ಗುರಿ ಹೊಂದಿದ್ದೇವೆ’ ಎಂದು ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯೆ ವಸುಂಧರಾ ಭೂಪತಿ, ‘ಅಕಾಡೆಮಿಗಳು ಪ್ರಶಸ್ತಿ ನೀಡುವಾಗ ಕೆಲವು ವರ್ಗದ ಸಾಹಿತಿಗಳನ್ನು ಮಾತ್ರ ಪರಿಗಣಿಸುತ್ತಿವೆ. ಅಲ್ಲಿ  ವಿಜ್ಞಾನ ಸಾಹಿತಿಗಳನ್ನು ಕಡೆಗಣಿಸಲಾಗಿದ್ದು, ಅವರನ್ನು ಗುರುತಿಸುವ ಕೆಲಸ ಆಗಬೇಕು’ ಎಂದು ಒತ್ತಾಯಿಸಿದರು. 

ವಿಜ್ಞಾನ ವಿಷಯಗಳಲ್ಲಿ ಕನ್ನಡ ಬರವಣಿಗೆ ಪ್ರೋತ್ಸಾಹಿಸಲು ಅಕಾಡೆಮಿ ‘ಶ್ರೇಷ್ಠ ಲೇಖಕ’ ಪ್ರಶಸ್ತಿ ನೀಡುತ್ತದೆ. ಈ ಬಾರಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ 19 ಪುಸ್ತಕಗಳು, ಕೃಷಿ 12,  ವೈದ್ಯಕೀಯದಲ್ಲಿ 10  ಹಾಗೂ 3 ತಂತ್ರಜ್ಞಾನ ವಿಷಯದ ಕುರಿತ ಪುಸ್ತಕಗಳು ಸೇರಿ ಒಟ್ಟು 44 ಪುಸ್ತಕಗಳು ಪ್ರಶಸ್ತಿ ಆಯ್ಕೆಗೆ ಬಂದಿದ್ದವು. ಅವುಗಳ ಉಪಯುಕ್ತತೆ, ಸ್ವಂತಿಕೆ, ಸರಳತೆಯನ್ನು ಗಮನಿಸಿ 6 ಲೇಖಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹25 ಸಾವಿರ ನಗದು, ಫಲಕ ಹೊಂದಿದೆ.

***

‘ವಿಜ್ಞಾನ ಪುಸ್ತಕಗಳ ಸಂಖ್ಯೆ ಕಡಿಮೆ’
‘ಮೊದಲು ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಿದ್ದೆವು. ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಕಟಗೊಂಡ ಪುಸ್ತಕಗಳನ್ನು ಪ್ರಶಸ್ತಿಗೆ ಆಹ್ವಾನಿಸುತ್ತಿದ್ದೆವು. ಆದರೆ, ವಿಜ್ಞಾನ ಪುಸ್ತಕಗಳ ಸಂಖ್ಯೆ ಕಡಿಮೆಯಾದ್ದರಿಂದ ಅದನ್ನು ಎರಡು ವರ್ಷಕ್ಕೊಮ್ಮೆ ನೀಡುತ್ತಿದ್ದೇವೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕ (ತಾಂತ್ರಿಕ) ಡಾ. ಎಚ್‌. ಹೊನ್ನೇಗೌಡ ಮಾಹಿತಿ ನೀಡಿದರು.

***

ಶ್ರೇಷ್ಠ ಲೇಖಕ ಪ್ರಶಸ್ತಿ ಪುರಸ್ಕೃತರು
ವಿಜ್ಞಾನ ಕ್ಷೇತ್ರ:
ಡಾ.ಪಾಲಹಳ್ಳಿ ವಿಶ್ವನಾಥ್ (‘ಶತಮಾನದ ಐನ್ ಸ್ಟೈನ್’ ಕೃತಿಗಾಗಿ),  ಪ್ರೊ. ಆರ್. ವೇಣುಗೋಪಾಲ್, ಡಾ.ಬಿ. ಎಸ್. ಜಯಪ್ರಕಾಶ್ (ರಸಾಯನ ವಿಜ್ಞಾನ ಬೆಳೆದ ಹಾದಿ ಪುಸ್ತಕಕ್ಕಾಗಿ)

ಕೃಷಿ ಕ್ಷೇತ್ರ: ದಾವಣಗೆರೆ ಜಿಲ್ಲೆಯ ಡಾ.ಎ.ಎಸ್. ಕುಮಾರಸ್ವಾಮಿ (ಅಂತರ್ಜಲ ಬಳಕೆ ಕೃತಿಗಾಗಿ)

ವೈದ್ಯಕೀಯ ಕ್ಷೇತ್ರ :  ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ (ಆರೋಗ್ಯ ಆಶಯ ಕೃತಿಗಾಗಿ), ಡಾ. ನಾಗೇಶ್‌ ಕುಮಾರ್‌ ಜಿ. ರಾವ್‌ (ನ್ಯಾಯ ವೈದ್ಯ ಮರಣೋತ್ತರ ಶವಪರೀಕ್ಷೆ ಕೃತಿಗಾಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT