ಕ್ವೀನ್ಸ್ ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳ ನೀರು ತುಂಬಿಹರಿಯಿತು. ಅದರಿಂದ ಭಾಗಶಃ ರಸ್ತೆಯಲ್ಲೇ ನೀರು ಹರಿದುಹೋಯಿತು. ಅದರಲ್ಲೇ ಸವಾರರು ವಾಹನ ಚಲಾಯಿಸಿಕೊಂಡು ಹೋದರು. ನೃಪತುಂಗ ರಸ್ತೆ, ಉಪ್ಪಾರಪೇಟೆ, ಮೆಜೆಸ್ಟಿಕ್, ಶೇಷಾದ್ರಿಪುರ, ಓಕಳಿಪುರ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.
ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಅರ್ಧ ಗಂಟೆ ಬಿಸಿಲು ಕಾಣಿಸಿಕೊಂಡು, ನಂತರ ಮೋಡ ಕವಿದ ಸ್ಥಿತಿಯೇ ಮುಂದುವರಿಯಿತು.
‘ಸಾಧಾರಣ ಮಳೆಯಾಗಿದ್ದರಿಂದ ಹಾನಿಯ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.
ಹವಾಮಾನ ಇಲಾಖೆಯ ಅಧಿಕಾರಿಗಳು ಮಾತನಾಡಿ, ‘ಕೊಟ್ಟಿಗೇಪಾಳ್ಯ, ಹೆರೋಹಳ್ಳಿ ಹಾಗೂ ಸುತ್ತಮುತ್ತ 1 ಮಿ.ಮೀ. ಮಳೆಯಾಗಿದೆ’ ಎಂದರು.