ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದೋಲ್ಲಾಸಕ್ಕೆ ಭರದ ಸಿದ್ಧತೆ

Last Updated 6 ಜುಲೈ 2017, 9:52 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಜುಲೈ 7 ರಿಂದ 9 ರವರೆಗೆ ಗುರುಪೂಜಾ ಸಂಗೀ ತೋತ್ಸವ ನಡೆಯಲಿದ್ದು ಕಾರ್ಯಕ್ರಮ ಕ್ಕಾಗಿ ಮಠ ಸಿಂಗಾರಗೊಳ್ಳುತ್ತಿದೆ. ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಬರುವ ಸಂಗೀತ ವಿದ್ವಾಂಸರಿಗೆ ಸ್ವಾಗತ ಕೋರಲು ಕೈವಾರ ಸಜ್ಜಾಗುತ್ತಿದೆ.

ಕೈವಾರ ಕ್ರಾಸ್‌, ಬಸ್‌ನಿಲ್ದಾಣ, ಕ್ರಾಸ್‌ನಿಂದ ಗ್ರಾಮದವರೆಗೂ ಸ್ವಾಗತ ಕಮಾನುಗಳು, ಮಠದ ಸಭಾಂಗಣದ ಮುಂದೆ ವಿಶಾಲವಾಗಿ ಶಾಮಿಯಾನ ಹಾಕುವ ಕಾರ್ಯ ಭರ ದಿಂದ ನಡೆಯುತ್ತಿದೆ. ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಆಷಾಢಮಾಸದ ಹುಣ್ಣಿಮೆಯು ಗುರುಗಳನ್ನು ಸ್ಮರಿಸುವ ದಿನ. ಯೋಗಿನಾರೇಯಣ ಯತೀಂದ್ರರು ಕೀರ್ತನೆ, ಶತಕಗಳಲ್ಲಿ ಗುರುಗಳ ಮಹತ್ವ ಕುರಿತು ಹಾಡಿದ್ದಾರೆ.
ಗುರುಪರಂಪರೆ ಉಳಿಸಿ ಆರಾಧಿಸುವುದರ ಜತೆಗೆ ಗುರುಗಳಿಗೆ ಕಲಾರಾಧನೆ ಮೂಲಕ ಭಕ್ತಿ ಸಮರ್ಪಿಸುವ ಗುರುಪೂಜಾ ಸಂಗೀತೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಮಠವು  ಸಿದ್ಧತೆ ಮಾಡಿಕೊಳ್ಳುತ್ತಿದೆ.

ಒಂದೇ ವೇದಿಕೆಯಲ್ಲಿ ನಾನಾ ಪ್ರಕಾರದ ಸಂಗೀತವನ್ನು ನೋಡುವ, ಕೇಳುವ, ಆರಾಧಿಸುವ ಅವಕಾಶ ದೊರೆಯಲಿದೆ. ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಮುಂಬೈ ಸೇರಿದಂತೆ ದೇಶದ ನಾನಾ ಭಾಗಗಳ ಸಂಗೀತ ವಿದ್ವಾಂಸರು ಮತ್ತು ರಾಜ್ಯದ ಕಲಾವಿದರು ಗಾನಸುಧೆ ಹರಿಸುವರು.

ನೃತ್ಯ, ಹರಿಕಥೆ, ಭಜನೆ, ಕೀರ್ತನೆ, ತತ್ವಪದಗಳ ಗಾಯನ  ನಿರಂತರವಾಗಿ 72 ಗಂಟೆ ನಡೆಯುತ್ತವೆ. ಕಾರ್ಯಕ್ರಮ ನಡೆಯುವ ಯೋಗಿನಾರಾಯಣ ಸಭಾಂಗಣದ ಮುಂದೆ ವಿಶಾಲವಾದ ಶಾಮಿಯಾನ ಹಾಕಲಾಗಿದೆ. ದೊಡ್ಡ  ಪರದೆಗಳನ್ನು ಅಳವಡಿಸಲಾಗಿದೆ.  ಎಲ್ಲ ಕಲಾವಿದರಿಗೆ, ಭಕ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ, ಸಂಕೀರ್ತನಾ ಯೋಜನೆ ಸಂಚಾಲಕ ಬಾಲಕೃಷ್ಣ ಭಾಗವತರ್‌ ಮಠದಲ್ಲಿಯೇ ಬೀಡು ಬಿಟ್ಟಿದ್ದಾರೆ. ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ. ಆಡಳಿತಾಧಿಕಾರಿ ಕೆ. ಲಕ್ಷ್ಮಿನಾರಾಯಣ್‌ ಮತ್ತು ಪ್ರವಚನಕಾರ ಟಿ.ಎಲ್‌.ಆನಂದ್‌ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT