ಮೂಲತಃ ಕೊಪ್ಪಳದವರಾದ ಅನುಷಾ ಈಗ ಬೆಂಗಳೂರು ನಿವಾಸಿ. ಕೆಲವು ತಿಂಗಳ ಹಿಂದೆ ಅಷ್ಟೇ ಆರಂಭಿಸಿದ ಈ ಆಭರಣ ತಯಾರಿಕೆಗೆ ಅವರ ಮನೆಯವರಿಂದ ಸಂಪೂರ್ಣವಾದ ಪ್ರೋತ್ಸಾಹವಿದೆ. ಗಂಡ ಪ್ರವೀಣ್ ಕುಮಾರ್ಗೂ ಕಲೆಯಲ್ಲಿ ಅಭಿರುಚಿ ಇರುವ ಕಾರಣ ಆಭರಣ ತಯಾರಿಕೆಗೆ ಅವರೂ ನೆರವಾಗುತ್ತಿದ್ದಾರಂತೆ. ಮಣ್ಣಿನ ಆಭರಣಗಳು, ರೇಷ್ಮೆನೂಲಿನ ಆಭರಣ, ಕಿವಿಯೋಲೆ. ಬಳೆಗಳು, ಸರಗಳು ಇವರ ಕೈಚಳಕದಲ್ಲಿ ಸೃಷ್ಟಿಯಾಗುತ್ತವೆ. ಬಣ್ಣಗಳ ಮೇಲೆ ಪ್ರಯೋಗ ಮಾಡುವುದು ಅನುಷಾ ಅವರಿಗೆ ಇಷ್ಟ. ಗುಲಾಬಿ, ನೀಲಿ ಹಾಗೂ ಹಸಿರು ಬಣ್ಣವನ್ನು ಆಭರಣಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈಗ ಹೆಚ್ಚು ಪ್ರಚಲಿತದಲ್ಲಿರುವ ಚಾಂದ್ಬಲಿ ಕಿವಿಯೋಲೆ ತಯಾರಿಸುವುದರಲ್ಲಿ ಅನುಷಾ ಪಳಗಿದ್ದಾರೆ. ರೇಷ್ಮೆ ದಾರ ಮತ್ತು ಮುತ್ತುಗಳನ್ನು ಬಳಸಿ ಹೆಚ್ಚಾಗಿ ಒಡವೆಗಳನ್ನು ಮಾಡುತ್ತಾರೆ.