ಬೆಂಗಳೂರು: ನಮ್ಮ ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಪೊಲೀಸರ ನಡುವೆ ಗುರುವಾರ ಮಾರಾಮಾರಿ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಖಂಡಿಸಿ ಶುಕ್ರವಾರ ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ ನಡೆಸಿದರ ಪರಿಣಾಮ ಮಧ್ಯಾಹ್ನದ ವರೆಗೆ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು.
ಮಧ್ಯಾಹ್ನ 11 ಗಂಟೆಗೆ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ನಮ್ಮ ಮೆಟ್ರೊ ಸಿಬ್ಬಂದಿ ಜತೆ ಸಭೆ ನಡೆಸಿದ್ದು, ಘಟನೆಯ ತನಿಖೆಗೆ ಸಮಿತಿ ರಚನೆಯ ಭರವಸೆ ನೀಡಿದ ಬಳಿಕ ಮಧ್ಯಾಹ್ನ 12ರ ವೇಳೆ ಪ್ರತಿಭಟನೆ ಹಿಂಪಡೆದಿದ್ದಾರೆ. ಇದೀಗ ನಮ್ಮ ಮೆಟ್ರೊ ಸಂಚಾರ ಪುನರಾರಂಭಗೊಂಡಿದೆ.