ಮುಷ್ಕರ ನಡೆಸಿದ ಬಿಎಂಆರ್ಸಿಎಲ್ ಸಿಬ್ಬಂದಿ ಮೇಲೆ 'ಎಸ್ಮಾ' ಜಾರಿಗೆ ಮುಂದಾಗಿತ್ತು ಸರ್ಕಾರ

ಬೆಂಗಳೂರು: ನಮ್ಮ ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಪೊಲೀಸರ ನಡುವೆ ಗುರುವಾರ ಮಾರಾಮಾರಿ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಖಂಡಿಸಿ ಶುಕ್ರವಾರ ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ ನಡೆಸಿದರ ಪರಿಣಾಮ ಮಧ್ಯಾಹ್ನದ ವರೆಗೆ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು.
ಮಧ್ಯಾಹ್ನ 11 ಗಂಟೆಗೆ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ನಮ್ಮ ಮೆಟ್ರೊ ಸಿಬ್ಬಂದಿ ಜತೆ ಸಭೆ ನಡೆಸಿದ್ದು, ಘಟನೆಯ ತನಿಖೆಗೆ ಸಮಿತಿ ರಚನೆಯ ಭರವಸೆ ನೀಡಿದ ಬಳಿಕ ಮಧ್ಯಾಹ್ನ 12ರ ವೇಳೆ ಪ್ರತಿಭಟನೆ ಹಿಂಪಡೆದಿದ್ದಾರೆ. ಇದೀಗ ನಮ್ಮ ಮೆಟ್ರೊ ಸಂಚಾರ ಪುನರಾರಂಭಗೊಂಡಿದೆ.
ಆದಾಗ್ಯೂ,ದಿಢೀರ್ ಮುಷ್ಕರ ಹೂಡಿದ ಮೆಟ್ರೊ ಸಿಬ್ಬಂದಿ ಮೇಲೆ ಸರ್ಕಾರ ಎಸ್ಮಾ ಕಾಯ್ದೆ ಜಾರಿ ಮಾಡಲು ಸರ್ಕಾರ ಮುಂದಾಗಿತ್ತು. ಮುಷ್ಕರ ನಿರತರ ಮೇಲೆ ಎಸ್ಮಾ ಕಾಯ್ದೆ ಜಾರಿಗೆ ತರುವುದಾಗಿ ಸರ್ಕಾರ ಹೇಳಿತ್ತು. ಅಷ್ಟರಲ್ಲೇ ಬಿಎಂಆರ್ಸಿಎಲ್ ಆಡಳಿತ, ಪೊಲೀಸ್ ಅಧಿಕಾರಿಗಳು ಹಾಗೂ ಪ್ರತಿಭಟನಾ ನಿರತ ಸಿಬ್ಬಂದಿ ಮಾತುಕತೆ ನಡೆಸಿದರು. ಸಿಬ್ಬಂದಿಯ ಬೇಡಿಕೆ ಈಡೇರಿಸಲು ಒಪ್ಪಿದ್ದರಿಂದ ಅವರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಎಸ್ಮಾ ಕಾಯ್ದೆ ಜಾರಿಗೆ ತರುವ ಬಗ್ಗೆ ಸರ್ಕಾರ ಹೊರಡಿಸಿರುವ ಅಧಿಸೂಚನೆ ಇಲ್ಲಿದೆ.
ಏನಿದು ಎಸ್ಮಾ?
ಎಸ್ಮಾ ಎಂದರೆ ‘ಅಗತ್ಯ ವಸ್ತುಗಳ ನಿರ್ವಹಣಾ ಕಾಯ್ದೆ’ (Essential Services Maintenance Act). ಎಸ್ಮಾ ಜಾರಿಯಾದರೆ ಪ್ರತಿಭಟನೆ ನಡೆಸುವ ನೌಕರರನ್ನು ವಾರೆಂಟ್ ಇಲ್ಲದೆ ಬಂಧಿಸಿ, ಜೈಲಿಗೆ ಕಳುಹಿಸಬಹುದಾಗಿದೆ.