ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ನಂತರ ತಯಾರಕರು ಉತ್ಪನ್ನಗಳ ಮೇಲೆ ಪರಿಷ್ಕೃತ ಎಂಆರ್ಪಿ ಮುದ್ರಿಸಲೇ ಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಶುಕ್ರವಾರ ಗ್ರಾಹಕರ ಹಕ್ಕು ಸಂರಕ್ಷಣೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ಸರ್ಕಾರ, ಜಿಎಸ್ಟಿ ಅನುಷ್ಠಾನದ ನಂತರ ತಯಾರಕರು ಉತ್ಪನ್ನಗಳಲ್ಲಿ ಪರಿಷ್ಕೃತ ಎಂಆರ್ಪಿ ಮುದ್ರಿಸದೆ ಮಾರಾಟ ಮಾಡಿದರೆ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದೆ.
ಲೀಗಲ್ ಮೆಟ್ರೊಲಜಿ ಕಾಯ್ದೆ 2009ರ ಪ್ರಕಾರ ಮೊದಲೇ ಪ್ಯಾಕ್ ಮಾಡಿದ ಸರಕುಗಳ ಮೇಲೆ ಗರಿಷ್ಠ ಮಾರಾಟ ದರ (ಎಂಆರ್ಪಿ) ಒಳಗೊಂಡ ಪರಿಷ್ಕೃತ ದರ ಮುದ್ರಿಸಬೇಕಾಗಿದೆ.
ಜುಲೈ 1ರಂದು ಜಿಎಸ್ಟಿ ಅನುಷ್ಠಾನಕ್ಕೆ ಬಂದ ನಂತರ ತಯಾರಕರು ಉತ್ಪನ್ನಗಳ ಮೇಲೆ ಮೂಲ ಎಂಆರ್ಪಿ ಮುಂದುವರೆಸಬೇಕು. ಜತೆಗೆ, ಪರಿಷ್ಕೃತ ದರವನ್ನೂ ಮುದ್ರಿಸಬೇಕು. ಮೂಲ ಎಂಆರ್ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತಿರಬೇಕು.
ಜಿಎಸ್ಟಿ ಫಲವಾಗಿ ಬೆಲೆ ಕುಸಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸದ, ಪರಿಷ್ಕೃತ ಎಂಆರ್ಪಿ ಘೋಷಿಸದ ಮಾರಾಟಗಾರರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಕೆಲವು ದಿನಗಳ ಹಿಂದೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್ ಪಾಸ್ವಾನ್ ಸರಣಿ ಟ್ವೀಟ್ ಮಾಡಿದ್ದರು.