ನವದೆಹಲಿ: ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ವು ತೀವ್ರ ಕಿರುಕುಳ ನೀಡುತ್ತಿದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುಪ್ರೀಂ ಕೋರ್ಟ್ ಎದುರು ಅಲವತ್ತುಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣದ ‘ಸಮಗ್ರ’ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಕಳೆದ ಮಾರ್ಚ್ನಲ್ಲಿ ಸೂಚಿಸಿದೆ. ಆದರೆ, ಎಸ್ಐಟಿಯು ಈ ಪ್ರಕರಣದ ತನಿಖೆ ನಡೆಸದೇ ಬೇರೆ ಪ್ರಕರಣಗಳ ಕುರಿತಂತೆ ಹೆಚ್ಚುವರಿಯಾಗಿ ಎಫ್ಐಆರ್ ದಾಖಲಿಸುತ್ತಿದೆ ಎಂದು ಕುಮಾರಸ್ವಾಮಿ ಪರ ವಕೀಲ ಶೇಖರ್ ನಾಫಡೆ ನ್ಯಾಯಪೀಠಕ್ಕೆ ತಿಳಿಸಿದರು.
ಅಂತಿಮ ತೀರ್ಪು ನೀಡುವವರೆಗೆ ಇತರ ಯಾವುದೇ ಕೆಳ ಹಂತದ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುವಂತಿಲ್ಲ, ಆದೇಶವನ್ನೂ ನೀಡುವಂತಿಲ್ಲ ಎಂದು ಸೂಚಿಸಿರುವ ನ್ಯಾಯಪೀಠವೇ ಅವರಿಗೆ ರಕ್ಷಣೆ ಒದಗಿಸಬೇಕು ಎಂದು ಅವರು ಕೋರಿದರು.