ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕ ವಿ.ಸುನಿಲ್ ಕುಮಾರ್ ಸೇರಿ 30 ಮಂದಿಯನ್ನು ಬಂಧಿಸಲಾಯಿತು. 800ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಇದ್ದರೂ ‘ಬಿ.ಸಿ.ರೋಡ್ ಚಲೋ’ ಪ್ರತಿಭಟನೆ ನಡೆಸಿದ ಕಾರಣ ಶುಕ್ರವಾರ ಬೆಳಿಗ್ಗೆ ಇಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.
ಐದಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದು ಎಂದು ಧ್ವನಿವರ್ಧಕದಲ್ಲಿ ಹೇಳುತ್ತಿದ್ದಾಗಲೇ ಸ್ಥಳದಲ್ಲಿ ದೊಡ್ಡ ಗುಂಪು ಸೇರಿತ್ತು. ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನಾಕಾರರ ನಡುವೆಯೇ ಸಂಸದರು ಧ್ವನಿವರ್ಧಕ ಇಲ್ಲದೆಯೇ ಭಾಷಣ ಮಾಡಿದರು. ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಪ್ರತಿಭಟನಾಕಾರರ ಜೈಕಾರ ಹೆಚ್ಚಾಯಿತು. ಭಟ್ ಅವರನ್ನು ಪ್ರತಿಭಟನಾಕಾರರು ಎತ್ತಿ ಹಿಡಿದು ಪ್ರದರ್ಶಿಸಿದರು. ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಕಲ್ಲಡ್ಕಗೆ ಕೊಲೆ ಬೆದರಿಕೆ: ಕ್ರಮಕ್ಕೆ ಶೋಭಾ ಆಗ್ರಹ
ಬೆಂಗಳೂರು: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ‘ಮಂಗಳೂರು ಮುಸ್ಲಿಂ’ ಎಂಬ ಫೇಸ್ಬುಕ್ ಪೇಜ್ನಲ್ಲಿ ಕೊಲೆ ಬೆದರಿಕೆ ಹಾಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.