ಬೆಂಗಳೂರು: ನಗರದ ನಿರ್ಲಕ್ಷ್ಯಿತ ಸಮುದಾಯಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ಲಿಮಿಟೆಡ್ (ಎಚ್ಜಿಎಸ್) ಸಂಸ್ಥೆಯು ಜಲಧಾರಾ ಫೌಂಡೇಷನ್ ಜತೆ ಒಪ್ಪಂದ ಮಾಡಿಕೊಂಡಿದೆ.
ಮೂರು ಜಲ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಎಚ್ಜಿಎಸ್ ಹಣಕಾಸು ನೆರವು ಒದಗಿಸಲಿದೆ. ಜಲಧಾರಾ ಫೌಂಡೇಷನ್ ಈ ಕೇಂದ್ರಗಳನ್ನು ಸ್ಥಾಪಿಸಲಿದೆ. ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇತ್ತೀಚೆಗೆ ಉದ್ಘಾಟಿಸಲಾಯಿತು.
ಈ ಕೇಂದ್ರಗಳು ಸುಮಾರು 5–10 ಕಿ.ಮೀ. ಪ್ರದೇಶದಲ್ಲಿ 90 ಸಾವಿರದಿಂದ 1 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಿವೆ. ಪ್ರತಿ ಗಂಟೆಗೆ 1,000 ಲೀ., ದಿನಕ್ಕೆ ಸುಮಾರು 8,000 ಲೀ. ನೀರು ಪೂರೈಸಲಿವೆ.
‘ವಿಶ್ವಬ್ಯಾಂಕ್ಗೆ ರಾಜ್ಯ ಸಲ್ಲಿಸಿದ ವರದಿ ಪ್ರಕಾರ, ರಾಜ್ಯದಲ್ಲಿ 2,000 ಕೊಳೆಗೇರಿಗಳಿದ್ದು, ಇದರಲ್ಲಿ 862 ಬೆಂಗಳೂರಿನಲ್ಲಿವೆ. ಈ ಪೈಕಿ 60ಕ್ಕೂ ಅಧಿಕ ಕೊಳೆಗೇರಿಗಳು ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತವಾಗಿವೆ. ಇಂತಹ ಸಮುದಾಯಕ್ಕೆ ನೀರು ಪೂರೈಸುವ ಗುರಿ ಇದೆ’ ಎಂದು ಎಚ್ಜಿಎಸ್ ಕಾರ್ಪೊರೇಟ್ ಕಮ್ಯುನಿಕೇಷನ್ನ ಹಿರಿಯ ಉಪಾಧ್ಯಕ್ಷೆ ಸ್ಮಿತಾ ಗಾಯಕ್ವಾಡ್ ತಿಳಿಸಿದರು.
ಜಲಧಾರಾ ಫೌಂಡೇಷನ್ ಮುಖ್ಯಸ್ಥ ಮಧು ಕೃಷ್ಣಮೂರ್ತಿ, ‘ಸಮುದಾಯದ ಅಗತ್ಯ ಆಧರಿಸಿ ಜಲ ಆರೋಗ್ಯ ಕೇಂದ್ರದ ನೀರು ಬಳಸಬಹುದು. ಇದರಿಂದ ನೀರಿನಿಂದ ಉಲ್ಬಣಿಸುವ ಆರೋಗ್ಯ ಸಮಸ್ಯೆಗಳು ಕುಗ್ಗಲಿವೆ’ ಎಂದರು.