ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮಧ್ಯದ ಮರಗಳ ಬುಡಕ್ಕೆ ಡಾಂಬರು!

Last Updated 8 ಜುಲೈ 2017, 6:42 IST
ಅಕ್ಷರ ಗಾತ್ರ

ಗದಗ: ಹುಬ್ಬಳ್ಳಿ–ಗದಗ–ಕೊಪ್ಪಳ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಸ್ಥಳಾಂತರಿಸಲು ಸಾಧ್ಯವಿಲ್ಲದ ಕೆಲ ಮರಗಳನ್ನು ಕಡಿದು ತೆರವುಗೊಳಿಸಲು ಗುರುತಿಸಲಾಗಿತ್ತು. ಆದರೆ, ಈ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡುವ ಪೂರ್ವದಲ್ಲೇ ಗುತ್ತಿಗೆದಾರರು ಮರಗಳ ಬುಡವನ್ನೂ ಸೇರಿಸಿ ರಸ್ತೆ ಡಾಂಬರೀ ಕರಣ ಮಾಡಿದ್ದಾರೆ.

ಪ್ರಗತಿಯ ಕೊಡ ಲಿಗೆ ಬಲಿಯಾಗಬೇಕಿದ್ದ ಮರಗಳು ತಾತ್ಕಾಲಿಕವಾಗಿ ಬದುಕುಳಿದಿವೆ. ಆದರೆ, ಈಗ ಹೆದ್ದಾರಿ ಮಧ್ಯ ಇಂತಹ 13ಕ್ಕೂ ಹೆಚ್ಚು ಮರಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ನಗರದ ಬಿಂಕದಕಟ್ಟಿಯಿಂದ ಜಿಲ್ಲಾ ಡಳಿತ ಭವನದ ನಡುವಿನ ಮಾರ್ಗದಲ್ಲಿ 5ಕ್ಕೂ ಹೆಚ್ಚು ಮರಗಳು ಮತ್ತು ಗದಗ–ಕೊಪ್ಪಳ ರಸ್ತೆಯಲ್ಲಿ 7ಕ್ಕೂ ಹೆಚ್ಚು ಮರಗಳ ಬುಡಕ್ಕೆ ಡಾಂಬರು ಹಾಕಿ, ಅದರ ಮೇಲೆ ಬುಲ್ಡೋಜರ್ ಹರಿಸಿ ಮಟ್ಟ ಮಾಡಲಾಗಿದೆ. ಈ ಮರಗಳು ತೀರಾ ರಸ್ತೆ ಬದಿಯಲ್ಲೂ ಇಲ್ಲ, ಹೆಚ್ಚಿ ನವು ರಸ್ತೆಯ ಮಧ್ಯಭಾಗದಲ್ಲಿವೆ. ಸವಾರ ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಮರಕ್ಕೆ ಅಪ್ಪಳಿಸುತ್ತದೆ.

‘ಎದುರಿಗಿರುವ ವಾಹನವನ್ನು ಹಿಂದಿಕ್ಕುವಾಗ, ಅಥವಾ ಹಿಂದಿನ ವಾಹ ನಕ್ಕೆ ಮಂದೆ ಹೋಗಲು ಅನುವು ಮಾಡಿಕೊಡುವಾಗ ಈ ಮರಗಳು ಅಡ್ಡ ಬರುತ್ತವೆ. ಈ ಪ್ರದೇಶದಲ್ಲಿ ಗಾಳಿವೇಗ ಹೆಚ್ಚಿರುವುದರಿಂದ ದ್ವಿಚಕ್ರ ವಾಹನ ಸವಾರರು ಸಮತೋಲನ ತಪ್ಪಿ ಮರಕ್ಕೆ ಗುದ್ದುವ ಸಾಧ್ಯತೆಗಳೂ ಇವೆ. ಮಳೆ ಬಂದಾಗಲಂತೂ ಈ ರಸ್ತೆ ತೀವ್ರ ಅಪಾಯಕಾರಿ’ ಎಂದು ಈ ಮಾರ್ಗದಲ್ಲಿ ಸದಾ ಸಂಚರಿಸುವ ಸರಕು ಸಾಗಣೆ ವಾಹನ ಚಾಲಕ ಮುತ್ತು ಯಲಿವಾಳ ಅಭಿಪ್ರಾಯಪಟ್ಟರು.

‘ರಾತ್ರಿ ವೇಳೆ, ವಾಹನಗಳ ಕಣ್ಣು ಕೊರೈಸುವ ಬೆಳಕಿನಲ್ಲಿ  ರಸ್ತೆ ಮಧ್ಯದಲ್ಲಿ ಮರ ಇದೆ ಎನ್ನುವುದೇ ಸವಾರರಿಗೆ ತಿಳಿಯುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಎಚ್ಚರಿಕೆ ಅಥವಾ ಸೂಚನಾ ಫಲಕವನ್ನೂ ಅಳವಡಿಸಿಲ್ಲ. ಡಾಂಬರು ಹಾಕಿರುವ ಮರದ ಬುಡದ ಸುತ್ತಲೂ ರಕ್ಷಣೆಗಾಗಿ ಮೂರು ನಾಲ್ಕು ಚೀಲಗಳಲ್ಲಿ ಮಣ್ಣು ತುಂಬಿ ಇಟ್ಟಿದ್ದಾರೆ’ ಎಂದು ಅವರು ದೂರಿದರು.  

‘ಮರಗಳ ಬುಡವನ್ನು ಸಂಪೂರ್ಣ ವಾಗಿ ಡಾಂಬರ್‌ನಿಂದ ಮುಚ್ಚಿದರೆ ಬೇರುಗಳಿಗೆ ನೀರು ಸಿಗದೇ ಮರಗಳು ಸಾಯುತ್ತವೆ. ಅಭಿವೃದ್ಧಿಗೆ ಮರಗಳು ಬಲಿ ಆಗುತ್ತಿವೆ’ ಎಂದು ಪ್ರೇಮಿ ಹಿರೇಲಾಲ ಆಕ್ರೋಶ ವ್ಯಕ್ತಪಡಿಸಿದರು.

‘ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಮರಗಳನ್ನು ಕಡಿದು ತೆರವುಗೊಳಿಸಲು ಗುತ್ತಿಗೆದಾರರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಹೆದ್ದಾರಿ ಪಕ್ಕದ ಮರಗಳ ತೆರವಿಗೆ ಸಂಬಂಧಿಸಿದ ವಿಚಾರಣೆ ರಾಷ್ಟ್ರೀಯ ನ್ಯಾಯಮಂಡಳಿ ಯಲ್ಲಿ (ಎನ್‌ಜಿಟಿ) ನಡೆಯುತ್ತಿದೆ. ಎನ್‌ಜಿಟಿ ಈಗಾಗಲೇ ಎರಡು  ಬಾರಿ ವಿಚಾರಣೆ ಮುಂದೂಡಿದೆ.

ಎನ್‌ಜಿಟಿ ತೀರ್ಪು ಬಂದ ಬಳಿಕ, ಅರಣ್ಯ ಇಲಾಖೆ ಗುತ್ತಿಗೆದಾರರಿಗೆ ಎನ್‌ಒಸಿ ನೀಡುತ್ತದೆ. ಆದರೆ, ಗುತ್ತಿಗೆ ದಾರರು ಅರಣ್ಯ ಇಲಾಖೆಯ ಅನು ಮತಿಗೂ ಕಾಯದೇ, ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲು, ಮರಗಳ ಬುಡ ಸೇರಿಸಿ ರಸ್ತೆಗೆ ಡಾಂಬರು ಹಾಕಿದ್ದಾರೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ ಪಾಲ ಕ್ಷೀರಸಾಗರ ತಿಳಿಸಿದರು.

1301  ಮರ ತೆರವು
ಹುಬ್ಬಳ್ಳಿ–ಗದಗ– ಕೊಪ್ಪಳ ರಸ್ತೆ ವಿಸ್ತರಣೆಗಾಗಿ, ರಸ್ತೆಯ ಬಲಭಾಗದಲ್ಲಿ  686 ಮರಗಳು ಹಾಗೂ ಎಡಭಾಗದಲ್ಲಿ 615 ಮರಗಳು ಸೇರಿ ಒಟ್ಟು 1301 ಮರಗಳನ್ನು ತೆರವಿಗೆ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

ಆಲ, ಅರಳಿ, ಬೇವು,  ಬನ್ನಿ, ಹುಣಸೆ, ತಪಸಿ, ಗೋಣಿ, ಬಸರಿ, ಬಕುಳ ಸೇರಿದಂತೆ 25ಕ್ಕೂ ಹೆಚ್ಚು ಜಾತಿಯ ಮರಗಳು ಇದರಲ್ಲಿವೆ. ಇದರಲ್ಲಿ 15ರಿಂದ 25 ವರ್ಷದ ಒಳಗಿನ 400ರಿಂದ 500ಕ್ಕೂ ಹೆಚ್ಚು ಮರಗಳನ್ನು ಗುರುತಿಸಿ, ಅವುಗಳನ್ನು ಸುರಕ್ಷಿತ ವಾಗಿ ಸ್ಥಳಾಂತರಿಸಿ ಬೇರೆಡೆ ನೆಡಲು ಯೋಜನೆ ರೂಪಿಸಲಾಗಿದೆ.

ಪ್ರಾಯೋಗಿಕವಾಗಿ 5 ಮರಗಳನ್ನು  ಹೆದ್ದಾರಿಯಿಂದ 12 ಕಿ.ಮೀ ದೂರ ಇರುವ ಭೀಷ್ಮಕೆರೆ ಆವರಣಕ್ಕೆ ಸ್ಥಳಾಂತರಿಸಿ ನೆಡಲಾಗಿದೆ. ಜಿಲ್ಲಾ ನ್ಯಾಯಾಲಯ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ವಿ.ವಿ, ಹೆರಿಗೆ ಆಸ್ಪತ್ರೆ ಆವರಣಕ್ಕೆ ಮರಗಳನ್ನು ನೆಡಲಾಗುವುದು. ಮರಗಳ ಸ್ಥಳಾಂತರ ಪ್ರಕ್ರಿಯೆ ಉಸ್ತುವಾರಿಗೆ ಜಿಲ್ಲಾಧಿಕಾರಿ, ಸಿಇಒ ನೇತೃತ್ವದ ಸಮಿತಿ ರಚಿಸಲಾಗಿದೆ.

ಮರಗಳ ಸ್ಥಳಾಂತರ
₹ 15 ಸಾವಿರ ಪ್ರತಿ ಮರ ಸ್ಥಳಾಂತರಕ್ಕೆ ತಗಲುವ ವೆಚ್ಚ

ಜಿಲ್ಲಾಡಳಿತ ಸಹಯೋಗ ಜಿಲ್ಲಾಡಳಿತ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ನಡೆದಿರುವ ಸ್ಥಳಾಂತರ ಕಾರ್ಯಾಚರಣೆ

5 ಮರಗಳು ಪ್ರಾಯೋಗಿಕವಾಗಿ ಸ್ಥಳಾಂತರಗೊಂಡಿವೆ

* * 

ಸದ್ಯ 5 ಮರಗಳ ಸ್ಥಳಾಂತರ ಮಾಡಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ ಇನ್ನಷ್ಟು ಮರಗಳನ್ನು ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುವುದು
ಯಶಪಾಲ ಕ್ಷೀರಸಾಗರ
ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT